ನವದೆಹಲಿ: ‘ವರ್ಷಕ್ಕೆ ₹ 8 ಲಕ್ಷದಿಂದ ₹ 9 ಲಕ್ಷದವರೆಗೆ ಆದಾಯ ಹೊಂದಿರುವವರು ಭವಿಷ್ಯ ನಿಧಿ, ಜೀವ ವಿಮೆ, ಪಿಂಚಣಿ ಯೋಜನೆಗಳಲ್ಲಿ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಮತ್ತು ಗೃಹ ಸಾಲ ಪಡೆದುಕೊಂಡಿದ್ದರೆ ಆದಾಯ ತೆರಿಗೆಯಿಂದ ಪಾರಾಗಬಹುದು’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
‘ಮಧ್ಯಂತರ ಬಜೆಟ್ನಲ್ಲಿ ಪ್ರಸ್ತಾಪಿಸಿರುವಂತೆ ₹ 5 ಲಕ್ಷದವರೆಗೆ ವಾರ್ಷಿಕ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಇದಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವವರು ಸಹ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ ‘80ಸಿ’ನಡಿ ಹೂಡಿಕೆ ಮಾಡಿದರೆ, ಶಿಕ್ಷಣ ಇಲ್ಲವೆ ಗೃಹ ಸಾಲದ ಬಡ್ಡಿ ಪಾವತಿಸಿದರೆ, ಗಂಭೀರ ಸ್ವರೂಪದ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಮಾಡಿದರೆ, ಅವರ ತೆರಿಗೆಗೆ ಒಳಪಡುವ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಾಗಲಿದೆ. ಇದರಿಂದಾಗಿ ₹ 8 ಲಕ್ಷದಿಂದ ₹ 9 ಲಕ್ಷದವರೆಗೆ ಆದಾಯ ಹೊಂದಿದ್ದರೂ ವಿನಾಯ್ತಿ ಪಡೆಯಬಹುದು’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸೆಕ್ಷನ್ 80ಸಿ ನಲ್ಲಿ ಪಿಪಿಎಫ್, ಜೀವ ವಿಮೆ, ಟ್ಯೂಷನ್ ಶುಲ್ಕ, ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಐದು ವರ್ಷಗಳ ಅವಧಿ ಠೇವಣಿಯನ್ನೂ ಒಳಗೊಂಡು ಒಂದು ವರ್ಷದಲ್ಲಿ ₹ 1.5 ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ವಿನಾಯ್ತಿ ಸಿಗಲಿದೆ.
ಗೃಹ ಸಾಲದ ಮೇಲಿನ ಬಡ್ಡಿದರಕ್ಕೆ ₹ 2ಲಕ್ಷದವರೆಗೆ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ₹ 50 ಸಾವಿರ ಹಾಗೂ ವೈದ್ಯಕೀಯ ವಿಮೆ ಪ್ರೀಮಿಯಂನಲ್ಲಿ ₹ 75 ಸಾವಿರದವರೆಗೆ ತೆರಿಗೆ ಉಳಿತಾಯ ಮಾಡಬಹುದು.
ವೇತನ ವರ್ಗದವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40 ಸಾವಿರದಿಂದ ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.