ನವದೆಹಲಿ: ದೇಶವು ಮಂದಗತಿಯ ಆರ್ಥಿಕತೆಯಿಂದ ಶೀಘ್ರವೇ ಹೊರಬರಲಿದ್ದು, ಮೂರನೇ ತ್ರೈಮಾಸಿಕದಲ್ಲಿ ಚೇತರಿಕೆ ಹಾದಿಗೆ ಮರಳಲಿದೆ ಎಂದು ಉದ್ಯಮವಲಯ ಹೇಳಿದೆ.
ಹಣಕಾಸು ವರ್ಷದ ಎರಡನೇತ್ರೈಮಾಸಿಕದಲ್ಲಿ ಜಿಡಿಪಿ ಶೇ 4.5ಕ್ಕೆ ಕುಸಿದಿದೆ. ಈ ಕುರಿತು ವಾಣಿಜ್ಯೋದ್ಯಮ ಸಂಘಗಳು ಪ್ರತಿಕ್ರಿಯೆ ನೀಡಿವೆ.
‘ಗ್ರಾಹಕರ ಖರೀದಿ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ’ ಎಂದು ಅಸೋಚಾಂನ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಅಭಿಪ್ರಾಯಪಟ್ಟಿದ್ದಾರೆ.
‘ಪ್ರಾಯೋಗಿಕವಾಗಿ ಕಾರ್ಯಸಾಧುವಾಗುವಂತಹ ನೀತಿಗಳನ್ನು ಜಾರಿಗೊಳಿಸುವುದರಿಂದ ನಾವು ಮತ್ತೊಮ್ಮೆ ಉನ್ನತ ಮಟ್ಟಕ್ಕೆ ಏರಬಹುದು’ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
‘ಖಾಸಗಿ ಹೂಡಿಕೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಇಳಿಮುಖವಾಗಿದೆ. ಹೀಗಿದ್ದರೂ ಹಬ್ಬದ ಸಂದರ್ಭದಲ್ಲಿ ವಹಿವಾಟಿನಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ಕೇಂದ್ರದ ಸುಧಾರಣಾ ಕ್ರಮಗಳಿಂದಾಗಿ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಎಫ್ಐಸಿಸಿಐನ ಅಧ್ಯಕ್ಷ ಸಂದೀಪ್ ಸೋಮಾನಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.