ನವದೆಹಲಿ: ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡಲು ಮಧ್ಯಂತರ ಲಾಭಾಂಶ ನೀಡುವಂತೆ ಕೇಂದ್ರ ಸರ್ಕಾರವು ಆರ್ಬಿಐ ಅನ್ನು ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆರ್ಬಿಐನಿಂದ ಅಂದಾಜು ₹ 34 ಸಾವಿರ ಕೋಟಿ ಮಧ್ಯಂತರ ಲಾಭಾಂಶ ಪಡೆಯುವ ಸಾಧ್ಯತೆ ಇದೆ.
ವರಮಾನ ಸಂಗ್ರಹ ಇಳಿಮುಖವಾಗಿದೆ. ಆರ್ಥಿಕ ಬೆಳವಣಿಗೆ ದರವು ಮೊದಲ ಎರಡನೇ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟವಾದಶೇ 5ಕ್ಕೆ ಕುಸಿದಿದೆ.
ಹೀಗಾಗಿ ಆರ್ಥಿಕತೆಗೆ ಚೇತರಿಕೆ ನೀಡಲು ಹಲವು ಸುಧಾರಣಾ ಕ್ರಮಗಳನ್ನು ಘೋಷಿಸುತ್ತಿದೆ. ಇದಕ್ಕೆ ಅಗತ್ಯವಾದ ಬಂಡವಾಳ ಸಂಗ್ರಹಿಸಿಕೊಳ್ಳುವುದು ಸರ್ಕಾರಕ್ಕೆ ಸವಾಲಾಗಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ರಲ್ಲಿ ನಿಯಂತ್ರಿಸುವ ಗುರಿ ಹೊಂದಲಾಗಿದೆ. ಆದರೆ, ತಜ್ಞರ ಪ್ರಕಾರ ವಿತ್ತೀಯ ಕೊರತೆಯು ಶೇ 3.8ಕ್ಕೆ ಏರಿಕೆಯಾಗಲಿದೆ. ವಿತ್ತೀಯ ಕೊರತೆ ನಿಯಂತ್ರಿಸಲು ಸರ್ಕಾರಕ್ಕೆ ಬಂಡವಾಳದ ಅಗತ್ಯವಿದೆ.
ಆರ್ಬಿಐನಿಂದಲಾಭಾಂಶ ಪಡೆಯುವ ಮಾರ್ಗವಲ್ಲದೆ, ಕೇಂದ್ರೋದ್ಯಮಗಳ ಷೇರು ವಿಕ್ರಯ, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗಳ (ಎನ್ಎಸ್ಎಸ್ಎಫ್) ಗರಿಷ್ಠ ಬಳಕೆಮಾಡುವ ಮೂಲಕವೂ ಬಂಡವಾಳ ಸಂಗ್ರಹಿಸಬಹುದಾಗಿದೆ. ಆದರೆ, ಷೇರು ವಿಕ್ರಯಕ್ಕೆ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ ಆರ್ಬಿಐ ಅನ್ನೇ ನೆಚ್ಚಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಹಣಕಾಸು ಸಚಿವಾಲಯ ಮತ್ತು ಆರ್ಬಿಐನ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.