ನವದೆಹಲಿ: ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ವೃದ್ಧಿ ದರದ (ಜಿಡಿಪಿ) ಪರಿಷ್ಕೃತ ಅಂಕಿ ಅಂಶಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.
‘ಹಣಕಾಸು ಸಚಿವಾಲಯದ ಪ್ರಭಾವಕ್ಕೆ ಒಳಗಾಗದ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್ಒ) ಈ ಪರಿಷ್ಕೃತ ಅಂಕಿ ಅಂಶ ಸಿದ್ಧಪಡಿಸಿದೆ. ಆಧಾರ ವರ್ಷವಾಗಿ 2011–12 ಪರಿಗಣಿಸಿ ಹೊಸ ಸೂತ್ರದಡಿ ಲೆಕ್ಕ ಹಾಕಿರುವ ಅಂಕಿ ಅಂಶಗಳು ಅರ್ಥ ವ್ಯವಸ್ಥೆಯ ನೈಜ ಚಿತ್ರಣ ನೀಡುತ್ತವೆ’ ಎಂದು ಪ್ರತಿಪಾದಿಸಿದ್ದಾರೆ.
’ನಾವು (ಎನ್ಡಿಎ) ಅರ್ಥ ವ್ಯವಸ್ಥೆಯನ್ನು ಅಸಮರ್ಪಕವಾಗಿ ನಿರ್ವಹಿಸದಿರುವುದನ್ನು ಹೊಸ ಜಿಡಿಪಿ ವಿವರಗಳು ಸಾಬೀತುಪಡಿಸಿವೆ. ಯುಪಿಎ ಅಧಿಕಾರಾವಧಿಯಲ್ಲಿನ ಜಿಡಿಪಿ ದರವು ‘ಎನ್ಡಿಎ’ಗಿಂತ ಹೆಚ್ಚಿಗೆ ಇದೆ ಎನ್ನುವ ಕಾಂಗ್ರೆಸ್ನ ವಾದದಲ್ಲಿ ಹುರುಳಿಲ್ಲದಿರುವುದನ್ನೂ ತೋರಿಸಿಕೊಟ್ಟಿವೆ’ ಎಂದು ಜೇಟ್ಲಿ ಹೇಳಿದ್ದಾರೆ.
ಚಿದಂಬರಂ ಟೀಕೆ: ‘ನೀತಿ ಆಯೋಗವು ಯುಪಿಎ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಿದೆ. ಕೆಲಸಕ್ಕೆ ಬಾರದ ಈ ಸಂಸ್ಥೆಯನ್ನು ರದ್ದು ಮಾಡಲು ಇದು ಸಕಾಲವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ.
ಪರಿಷ್ಕೃತ ವೃದ್ಧಿ ದರದ ಬಗ್ಗೆ ಚರ್ಚೆಗೆ ಆಹ್ವಾನ ನೀಡಿರುವ ಚಿದಂಬರಂ ಅವರ ಸವಾಲನ್ನು ಸ್ವೀಕರಿಸುವುದಾಗಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.
ವಿವಾದದಲ್ಲಿ ನೀತಿ ಆಯೋಗದ ಪಾತ್ರ
ಪರಿಷ್ಕೃತ ಜಿಡಿಪಿ ವಿವರ ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗವು ಭಾಗವಹಿಸಿರುವುದು ವಿವಾದಕ್ಕೆಎಡೆಮಾಡಿಕೊಟ್ಟಿದೆ.
ಈ ಚಿಂತಕರ ಚಾವಡಿಯನ್ನು ಸುದ್ದಿಗೋಷ್ಠಿಯಿಂದ ಹೊರಗೆ ಇಟ್ಟಿದ್ದರೆ ವಿವಾದ ತಪ್ಪಿಸಬಹುದಾಗಿತ್ತು ಎಂದು ಸರ್ಕಾರದ ಭಾಗವಾಗಿರುವ ಕೆಲವರು ಪ್ರತಿಪಾದಿಸಿದ್ದಾರೆ.
ಕೇಂದ್ರೀಯ ಸಾಂಖ್ಯಿಕ ಕಚೇರಿಯು ಸ್ವತಂತ್ರ ಸಂಸ್ಥೆಯಾಗಿರುವಾಗ ಜಂಟಿ ಸುದ್ದಿಗೋಷ್ಠಿ ನಡೆಸಿರುವಬಗ್ಗೆ ಇವರು ಆಕ್ಷೇಪವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.