
ನವದೆಹಲಿ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮಗ ಜಯ್ ಅನ್ಮೋಲ್ ಅಂಬಾನಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ಸತತ ಎರಡನೇ ದಿನವೂ ವಿಚಾರಣೆಗೆ ಒಳಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯೆಸ್ ಬ್ಯಾಂಕ್ ಸಾಲ ವಂಚನೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈ ತನಿಖೆ ನಡೆಯುತ್ತಿದೆ.
ಶುಕ್ರವಾರ ಮೊದಲ ಬಾರಿಗೆ ಅನ್ಮೋಲ್ ಅವರ ಹೇಳಿಕೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ‘ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್’ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣದಲ್ಲಿ ಅನಿಲ್ ಅಂಬಾನಿ ಅವರನ್ನು ಈ ಹಿಂದೆಯೆ ಇ.ಡಿ ಪ್ರಶ್ನಿಸಿದೆ.
2017ರ ಮಾರ್ಚ್ 31ರ ಹೊತ್ತಿಗೆ ‘ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್’ನಲ್ಲಿ ಸುಮಾರು ₹6,000 ಕೋಟಿಗಳ ಹೂಡಿಕೆ ಇತ್ತು. ಇದು ಒಂದು ವರ್ಷದೊಳಗೆ ದ್ವಿಗುಣಗೊಂಡು ₹13,000 ಕೋಟಿಗಳಿಗೆ ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹೂಡಿಕೆಗಳಲ್ಲಿ ‘ದೊಡ್ಡ’ ಭಾಗವು ನಿಷ್ಕ್ರಿಯ ಹೂಡಿಕೆಯಾಗಿ (ಎನ್ಪಿಐ) ಪರಿವರ್ತನೆಗೊಂಡಿತು. ಈ ವ್ಯವಹಾರಗಳಿಂದ ಬ್ಯಾಂಕ್ ₹3,300 ಕೋಟಿ ನಷ್ಟವನ್ನು ಅನುಭವಿಸಿತು ಎಂದು ಇ.ಡಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.