
ಮೇಳದಲ್ಲಿ ಮಹೀಂದ್ರಾ ಇವಿ ಆಟೋವನ್ನು ಎಚ್.ಡಿ. ಕುಮಾರಸ್ವಾಮಿ ಪರಿಶೀಲಿಸಿದರು
ಬೆಂಗಳೂರು: ‘ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ (ಇ.ವಿ) ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದೆ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅರಮನೆ ಮೈದಾನದಲ್ಲಿ ‘ಇವಿ ಎವರೆಡಿ– 2026’ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ವಿಪುಲ ಅವಕಾಶಗಳಿವೆ. ಅನೇಕ ದೊಡ್ಡ ಕಂಪನಿಗಳು ರಾಜ್ಯವನ್ನು ಕಾರ್ಯಕ್ಷೇತ್ರ ಮಾಡಿಕೊಂಡಿವೆ. ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಎಂಜಿನಿಯರಿಂಗ್ ಮತ್ತು ಸ್ಟಾರ್ಟ್ಅಪ್ಗಳಲ್ಲಿ ಬೆಂಗಳೂರಿನ ನೆಲೆಯು, ರಾಜ್ಯವು ಇವಿ ವಾಹನಗಳ ನಾವೀನ್ಯತೆ ಮತ್ತು ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲು ಸಹಕಾರಿ ಆಗಿದೆ’ ಎಂದರು.
‘ಮೋದಿ ನೇತೃತ್ವದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನಗಳ ಚಲನಶೀಲತೆಯ ಪರಿವರ್ತನಾತ್ಮಕ ವೇಗ ಪಡೆದುಕೊಳ್ಳುತ್ತಿದ್ದು, ಜಾಗತಿಕ ಸ್ಪರ್ಧೆಗೆ ಅನುಗುಣವಾಗಿ ಗುಣಾತ್ಮಕವಾಗಿ ಬೆಳವಣಿಗೆ ಹೊಂದುತ್ತಿದೆ. ವಿದ್ಯುತ್ ಚಾಲಿತ ವಾಹನಗಳು ಕೇವಲ ಸ್ವಚ್ಛ ಸಾರಿಗೆಗೆ ಪೂರಕ ಮಾತ್ರವಲ್ಲ, ಅವು ಇಂಧನ ಸುರಕ್ಷತೆ, ತಾಂತ್ರಿಕ ನಾಯಕತ್ವ ಮತ್ತು ನಮ್ಮ ಯುವಕರಿಗೆ ಹೊಸ ಆರ್ಥಿಕ ಅವಕಾಶಗಳನ್ನು ವಿಪುಲವಾಗಿ ತೆರೆಯುತ್ತವೆ’ ಎಂದೂ ಅವರು ಪ್ರತಿಪಾದಿಸಿದರು.
ಬೃಹತ್ ಕೈಗಾರಿಕಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ, ಆಟೋಮೊಬೈಲ್ ವಲಯದಲ್ಲಿನ ಪ್ರಗತಿಯ ವೇಗದ ಕುರಿತು ಮಾಹಿತಿ ನೀಡಿದರು. ಆಟೋ ಉದ್ಯಮದ ಕೆ.ಎನ್. ರಾಧಾಕೃಷ್ಣನ್, ಸುಮನ್ ಮಿಶ್ರಾ, ಸುಲಜಾ ಪಿರೋಡಿಯಾ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.