ರಾಘವೇಂದ್ರ ಭಟ್
ನವದೆಹಲಿ: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ಬ್ಯಾಂಕ್ ಸೋಮವಾರ ನೇಮಿಸಿದೆ.
ಜುಲೈ 16ಕ್ಕೆ ಇವರ ಅಧಿಕಾರಾವಧಿ ಆರಂಭವಾಗಲಿದ್ದು, ಕಾಯಂ ಎಂಡಿ ಹಾಗೂ ಸಿಇಒ ನೇಮಕವಾಗುವ ಮೂರು ತಿಂಗಳವರೆಗೂ ರಾಘವೇಂದ್ರ ಭಟ್ ಅವರು ಈ ಹುದ್ದೆಯಲ್ಲಿರಲಿದ್ದಾರೆ ಎಂದು ಷೇರು ಮಾರುಕಟ್ಟೆಗೆ ಬ್ಯಾಂಕ್ ಮಾಹಿತಿ ನೀಡಿದೆ.
ಕರ್ಣಾಟಕ ಬ್ಯಾಂಕ್ನ ಹಾಲಿ ಎಂಡಿ ಮತ್ತು ಸಿಇಒ ಶ್ರೀಕೃಷ್ಣ ಹರಿಹರ ಶರ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಮಧ್ಯಂತರ ಅಧಿಕಾರಿಯಾಗಿ ರಾಘವೇಂದ್ರ ಭಟ್ ನಿಯೋಜನೆಗೊಂಡಿದ್ದಾರೆ. ಶರ್ಮ ಅವರು ಮುಂಬೈಗೆ ತೆರಳಲು ಸಾಧ್ಯವಾಗದ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಿದ್ದರು. ಜತೆಗೆ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರು ಮಂಗಳೂರಿಗೆ ಹೋಗಲು ನಿರಾಕರಿಸಿ ಅವರೂ ರಾಜೀನಾಮೆ ಸಲ್ಲಿಸಿದ್ದರು.
ರಾಘವೇಂದ್ರ ಭಟ್ ಅವರು 1981ರಲ್ಲಿ ಸಹಾಯಕರಾಗಿ ತಮ್ಮ ಬ್ಯಾಂಕ್ ವೃತ್ತಿಯನ್ನು ಆರಂಭಿಸಿದವರು. ಜುಲೈ 2ರಂದು ಸಿಒಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ‘ಕರ್ಣಾಟಕ ಬ್ಯಾಂಕ್ನ ಎಂಡಿ ಮತ್ತು ಸಿಇಒ ಆಗಿ ನೇಮಕಗೊಂಡಿದ್ದಕ್ಕೆ ಹೆಮ್ಮೆ ಎನಿಸಿದೆ. ಶತಮಾನಗಳ ನಂಬಿಕೆ ಹಾಗೂ ಅಭಿಮಾನವನ್ನು ಗಳಿಸಿರುವ ಬ್ಯಾಂಕ್ನ ಎಲ್ಲಾ ಪಾಲುದಾರರೊಂದಿಗೆ ಜತೆಗೂಡಿ ಬ್ಯಾಂಕ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿದ್ದೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.