ADVERTISEMENT

ಧಾನ್ಯಗಳ ದಾಸ್ತಾನು ನಿರ್ವಹಣೆ: ಎಚ್ಚರಿಕೆ ಅಗತ್ಯ: ಕೇಂದ್ರ ಹಣಕಾಸು ಸಚಿವಾಲಯ

ಹಣಕಾಸು ಸಚಿವಾಲಯದ ಆರ್ಥಿಕ ಪರಿಶೀಲನಾ ವರದಿಯಲ್ಲಿ ಸಲಹೆ

ಪಿಟಿಐ
Published 17 ಸೆಪ್ಟೆಂಬರ್ 2022, 12:55 IST
Last Updated 17 ಸೆಪ್ಟೆಂಬರ್ 2022, 12:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ ಕಡಿಮೆ ಆಗಿರುವುದರಿಂದ ಕೃಷಿ ಉತ್ಪನ್ನಗಳ ದಾಸ್ತಾನು ಮತ್ತು ಬೆಲೆಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಣೆ ಮಾಡುವ ಅಗತ್ಯ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಕುಗಳ ದರ ಇಳಿಕೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಸುಧಾರಣೆ ಕಂಡುಬಂದಿದೆ. ಇವುಗಳ ಜೊತೆಗೆಕೇಂದ್ರ ಸರ್ಕಾರದ ಪೂರ್ವಭಾವಿ ಕ್ರಮಗಳು ಹಾಗೂ ಹಣಕಾಸು ನೀತಿ ಬಿಗಿಗೊಂಡಿರುವುದರಿಂದ ‌ಹಣದುಬ್ಬರವು ಇಳಿಕೆ ಆಗುತ್ತಿರುವಂತೆ ಕಾಣುತ್ತಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ ಕಡಿಮೆ ಆಗಿರುವುದರಿಂದ ಹಣದುಬ್ಬರದ ವಿಷಯದಲ್ಲಿ ನೆಮ್ಮದಿಯಿಂದ ಇರುವಂತೆ ಇಲ್ಲ ಎಂದು ಸೆಪ್ಟೆಂಬರ್‌ ತಿಂಗಳ ಆರ್ಥಿಕ ಪರಿಶೀಲನಾ ವರದಿಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಉತ್ಪಾದನೆ ಆಗುತ್ತಿರುವ ಅಕ್ಕಿಯಲ್ಲಿ ಮುಂಗಾರು ಅವಧಿಯಲ್ಲಿ ಉತ್ಪಾದನೆ ಆಗುವ ಪ್ರಮಾಣವೇ ಶೇ 80ರಷ್ಟು ಇದೆ. ಆದರೆ, ಭತ್ತ ಬಿತ್ತನೆ ಪ್ರದೇಶದಲ್ಲಿ ಇಳಿಕೆ ಆಗಿರುವುದರಿಂದ ಈ ಬಾರಿ ಅಕ್ಕಿ ಉತ್ಪಾದನೆ 70 ಲಕ್ಷ ಟನ್‌ಗಳಷ್ಟು ಕಡಿಮೆ ಆಗುವ ಅಂದಾಜು ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಈವರೆಗೆ1093 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಆಹಾರ ಧಾನ್ಯಗಳ ಬಿತ್ತನೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1,102 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.

ADVERTISEMENT

ಗ್ರಾಹಕರ ಖರೀದಿ ಸಾಮರ್ಥ್ಯ ಸುಧಾರಿಸಿದ್ದು, ಉದ್ಯೋಗದಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದಾಗಿ ಮುಂಬರುವ ತಿಂಗಳುಗಳಲ್ಲಿ ಆರ್ಥಿಕತೆಯು ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಸರ್ಕಾರ ಮಾಡುತ್ತಿರುವ ವೆಚ್ಚವು ಶೇ 35ರಷ್ಟು ಏರಿಕೆ ಕಂಡಿದೆ. ಇದರಿಂದಾಗಿ ದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಉತ್ತೇಜನಕಾರಿ ಆಗಿವೆ. ತೆರಿಗೆ ವರಮಾನ ಸಂಗ್ರಹವೂ ಉತ್ತಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.