ಬೆಂಗಳೂರು: ಜಾಗತಿಕ ಆರ್ಥಿಕ ಶಕ್ತಿಯಾಗುವ ಭಾರತದ ಮಹತ್ವಾಕಾಂಕ್ಷೆಗೆ ವ್ಯಾಪಾರ ವಲಯದಲ್ಲಿನ ಸದ್ಯದ ಸವಾಲುಗಳು ಪೆಟ್ಟು ನೀಡಬಲ್ಲವೇ ಎಂಬ ಜಾಗತಿಕ ಮಾಧ್ಯಮಗಳ ವಿಶ್ಲೇಷಣೆಗೆ ಉದ್ಯಮಿ ಆನಂದ ಮಹೀಂದ್ರ ಕಿಡಿ ಕಾರಿದ್ದಾರೆ.
ಭಾರತದ ವಿರುದ್ಧ ಎಂದಿಗೂ ಬಾಜಿ ಕಟ್ಟಬೇಡಿ ಎಂದು ಅವರು ಎಚ್ಚರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ವ್ಯಾಪಾರ ವಲಯದಲ್ಲಿನ ಪ್ರಸ್ತುತ ಸವಾಲುಗಳು ಜಾಗತಿಕ ಆರ್ಥಿಕ ಶಕ್ತಿಯಾಗುವ ಭಾರತದ ಮಹತ್ವಾಕಾಂಕ್ಷೆಗಳಿಗೆ ಪೆಟ್ಟು ನೀಡಬಲ್ಲವೇ ಎಂದು ಜಾಗತಿಕ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಭೂಕಂಪ, ಬರ, ಆರ್ಥಿಕ ಹಿಂಜರಿತ, ಯುದ್ಧ, ಭಯೋತ್ಪಾದಕ ದಾಳಿಗಳನ್ನು ಭಾರತ ಎದುರಿಸಿರುವುದನ್ನು ನಾನು ನೋಡಿದ್ದೇನೆ. ನಾನು ಹೇಳುವುದೊಂದೇ... ಭಾರತದ ವಿರುದ್ಧ ಬಾಜಿ ಕಟ್ಟಬೇಡಿ’ ಎಂದು ಅವರು ವಿಶ್ಲೇಷಣಾ ವರದಿಗಳಿಗೆ ತಿರುಗೇಟು ನೀಡಿದ್ದಾರೆ.
ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಉದ್ಯಮಿ. ಉದ್ಯಮ, ಯಶಸ್ಸು, ಹಾಸ್ಯ, ಸ್ಪೂರ್ತಿದಾಯಕ ಕಥೆಗಳನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.
ಉದ್ಯಮಿ ಗೌತಮ್ ಅದಾನಿ ಅವರ ಕುರಿತ ಸಂಶೋಧನಾ ಸಂಸ್ಥೆ 'ಹಿಂಡೆನ್ಬರ್ಗ್' ವರದಿ, ಅದರ ಪರಿಣಾಮವಾಗಿ ಅದಾನಿ ಸಮೂಹದ ನಷ್ಟ ದೇಶದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ, ಆನಂದ್ ಮಹೀಂದ್ರ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.