ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಅಡುಗೆ ಲಭ್ಯತೆ ಮೇಲೆ ಒಂದಿಷ್ಟು ಪರಿಣಾಮ ಆಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಈ ಮಾತು ಹೇಳಿದರು. ‘ನಾವು ಈಗಾಗಲೇ ಬೇರೆ ಮೂಲಗಳನ್ನು ಹುಡುಕುವ ಕೆಲಸ ಆರಂಭಿಸಿದ್ದೇವೆ. ಸೂರ್ಯಕಾಂತಿ ಎಣ್ಣೆ ಅಲ್ಲದಿದ್ದರೆ ಭಾರತದಲ್ಲಿ ಬಳಕೆಯಲ್ಲಿ ಇರುವ ಬೇರೆ ಯಾವುದಾದರೂ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಹುಡುಕಾಟ ಶುರುವಾಗಿದೆ’ ಎಂದು ವಿವರಿಸಿದರು.
ಭಾರತಕ್ಕೆ ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆಯು ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗುತ್ತದೆ. ಆದರೆ, ಅಲ್ಲಿ ಯುದ್ಧ ಆರಂಭವಾದಾಗಿನಿಂದ ಅಡುಗೆ ಎಣ್ಣೆ ರಫ್ತಿಗೆ ಏಟು ಬಿದ್ದಿದ್ದು, ಭಾರತದಲ್ಲಿ ಪೂರೈಕೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ ಎಂದು ಮೂಲಗಳು ಹೇಳಿವೆ. ದೇಶಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ದುಬಾರಿಯಾಗಿದೆ.
ದೇಶದಲ್ಲಿ ಪೂರಕ ವಾತಾವರಣ ಇರುವ ಕಡೆಗಳಲ್ಲಿ ಎಣ್ಣೆ ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಕಾರ್ಯಕ್ರಮ ಕೂಡ ಚಾಲ್ತಿಯಲ್ಲಿ ಇದ್ದು, ಫಲ ಕೈಗೆ ಸಿಗಲು ಆರು ವರ್ಷಗಳ ಕಾಲಾವಕಾಶದ ಅಗತ್ಯವಿದೆ ಎಂದು ನಿರ್ಮಲಾ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.