ADVERTISEMENT

ಈರುಳ್ಳಿ ಬೆಲೆ ಕುಸಿತ: ಕಂಗಾಲಾದ ರೈತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 1:15 IST
Last Updated 11 ಸೆಪ್ಟೆಂಬರ್ 2025, 1:15 IST
ಬಾಗಲಕೋಟೆ ಎಪಿಎಂಸಿಗೆ ಹರಾಜಿಗೆ ಬಂದಿರುವ ಈರುಳ್ಳಿ
ಬಾಗಲಕೋಟೆ ಎಪಿಎಂಸಿಗೆ ಹರಾಜಿಗೆ ಬಂದಿರುವ ಈರುಳ್ಳಿ   

ಬಾಗಲಕೋಟೆ: ‘ಕಳೆದ ವರ್ಷ ಕ್ವಿಂಟಲ್‌ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್‍ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು ಹಳ್ಳೂರ ಗ್ರಾಮದ ರೈತ ಬಸಲಿಂಗಪ್ಪ ರಡ್ಡೇರ ಬೇಸರ ತೋಡಿಕೊಂಡರು.

ಜಿಲ್ಲೆಯಲ್ಲಿ ಪ್ರತಿ ವರ್ಷ 30ರಿಂದ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತಿತ್ತು. ಕಳೆದ ವರ್ಷ ಹೆಚ್ಚಿನ ಬೆಲೆ ದೊರೆತಿದ್ದರಿಂದ ಬಿತ್ತನೆ ಪ್ರಮಾಣ ₹42 ಸಾವಿರ ಹೆಕ್ಟೇರ್‌ಗೆ ಹೆಚ್ಚಾಗಿದೆ. ಅತಿಯಾದ ಮಳೆಯಿಂದಾಗಿ ಅರ್ಧದಷ್ಟು ಈರುಳ್ಳಿ ಬೆಳೆ ಹಾಳಾಗಿದೆ. ಆದರೂ, ಉತ್ತಮ ಬೆಲೆ ದೊರೆಯುತ್ತಿಲ್ಲ.

ಬಾಗಲಕೋಟೆ ಎಪಿಎಂಸಿಗೆ 3 ಸಾವಿರ ಕ್ವಿಂಟಲ್‌ ಈರುಳ್ಳಿ ಆವಕವಾಗಿತ್ತು. ಕ್ವಿಂಟಲ್‌ಗೆ ಕನಿಷ್ಠ ₹500, ಗರಿಷ್ಠ ₹1,800 ದೊರೆತಿದೆ. ₹1,200 ಮಾದರಿ ಬೆಲೆಯಾಗಿದೆ. ಕಳೆದ ಬಾರಿ ಸಿಕ್ಕ ಬೆಲೆಗೆ ಹೋಲಿಸಿದರೆ ಈ ಬಾರಿ ಅರ್ಧಕ್ಕೂ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.

ADVERTISEMENT

ಬೆಳೆ ಹಾನಿ:

ಒಂದೆಡೆ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಅತಿಯಾದ ಮಳೆಯಿಂದಾಗಿ ಬೆಳೆದು ನಿಂತಿದ್ದ ಬೆಳೆ ಕಣ್ಮುಂದೆಯೇ ಹಾಳಾಗಿ, ಮಣ್ಣು ಸೇರಿದೆ.

‘ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಅಂದಾಜು 23,400 ಹೆಕ್ಟೇರ್‌ನಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಇನ್ನೂ ನಡೆದಿದ್ದು, ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ‘ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ.

ವಾರಗಳ ಕಾಲ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆತಿದೆ. ಜತೆಗೆ ಪ್ರವಾಹಕ್ಕೂ ಸಿಲುಕಿ ಹಾಳಾಗಿದೆ. ಸಮೀಕ್ಷೆ ನಂತರ ಪರಿಹಾರ ನೀಡಲಾಗುವುದು ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈರುಳ್ಳಿ ಬೆಳೆಗಾರರಿಗೆ ಕಡಿಮೆ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುವ ವಿಶ್ವಾಸವಿದೆ
ವಿ.ಡಿ.ಪಾಟೀಲ, ಕಾರ್ಯದರ್ಶಿ, ಎಪಿಎಂಸಿ ಬಾಗಲಕೋಟೆ

ಸತತ ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಕುಸಿದಿದೆ. ಗಡ್ಡೆಗಳನ್ನು ಕಾಯ್ದಿಟ್ಟುಕೊಳ್ಳುವುದೇ ಸವಾಲಾಗಿದೆ. ಬಿಸಿಲು ಬೀಳದ್ದರಿಂದಾಗಿ ಹಾಳಾಗುತ್ತಿದೆ.

ಬೆಲೆ ಕುಸಿದಿರುವುದರಿಂದ ಬಿತ್ತನೆ, ಕಳೆ, ಔಷಧಕ್ಕಾಗಿ ಮಾಡಿದ ಖರ್ಚೂ ಕೈಗೆ ಸಿಗುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸಾಗಾಟದ ವೆಚ್ಚ ಮೈಮೇಲೆ ಬರುತ್ತದೆ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.