ಮುಂಬೈ: ರತನ್ ಟಾಟಾ ಅವರ ಆಪ್ತ, ಪದ್ಮಶ್ರೀ ಪುರಸ್ಕೃತ ದಿಗ್ಗಜ ಉದ್ಯಮಿ ಆರ್. ಕೃಷ್ಣಕುಮಾರ್ ಅವರು ಭಾನುವಾರ ಸಂಜೆ ನಿಧನರಾದರು.
ಮುಂಬೈನ ಸ್ವಗೃಹದಲ್ಲಿ ಹೃದಯಾಘಾತವಾಯಿತು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅಂತ್ಯಸಂಸ್ಕಾರವು ಇಂದು ನೆರವೇರಲಿದೆ.
ಕೇರಳ ಮೂಲದ ಕೃಷ್ಣಕುಮಾರ್, ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಮುಖ್ಯಸ್ಥ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.
ಕೃಷ್ಣಕುಮಾರ್ ನಿಧನಕ್ಕೆ ರತನ್ ಟಾಟಾ ಸಂತಾಪ ಸೂಚಿಸಿದ್ದಾರೆ. ನನ್ನ ಸ್ನೇಹಿತ, ಸಹೋದ್ಯೋಗಿ ಅವರ ಅಗಲಿಕೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಉದ್ಯಮ ಮತ್ತು ವೈಯಕ್ತಿಕವಾಗಿ ಅವರ ಜೊತೆಗಿನ ಒಡನಾಟವನ್ನು ಸದಾ ಸ್ಮರಿಸುತ್ತೇನೆ. ಅವರು ಟಾಟಾ ಸಮೂಹ ಮತ್ತು ಟಾಟಾ ಟ್ರಸ್ಟ್ನ ನಿಜವಾದ ದಿಗ್ಗಜರಾಗಿದ್ದು, ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರ್ ಸಹ ಸಂತಾಪ ಸೂಚಿಸಿದ್ದು, ಟಾಟಾ ಸಮೂಹಕ್ಕೆ ಕೃಷ್ಣಕುಮಾರ್ ನೀಡಿದ್ದ ಅಗಾಧ ಕೊಡುಗೆಯನ್ನು ಸ್ಮರಿಸಿದ್ದಾರೆ.
ಕೃಷ್ಣಕುಮಾರ್ ಅವರು ಕಾರ್ಯನಿರ್ವಾಹಕ ಹುದ್ದೆಗಳಿಂದ ನಿವೃತ್ತರಾದ ಬಳಿಕ ಟಾಟಾ ಟ್ರಸ್ಟ್ಗಳಲ್ಲಿ ಸಕ್ರಿಯರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.