ADVERTISEMENT

₹2000 ನೋಟು ವಿನಿಮಯಕ್ಕೆ ಭೀತಿ ಬೇಡ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಪಿಟಿಐ
Published 22 ಮೇ 2023, 15:34 IST
Last Updated 22 ಮೇ 2023, 15:34 IST
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ   

ನವದೆಹಲಿ: ₹2 ಸಾವಿರದ ನೋಟುಗಳನ್ನು ಬದಲಿಸಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಲು ಸಾಕಷ್ಟು ಸಮಯ ಇರುವ ಕಾರಣ, ಜನರು ಗಾಬರಿಗೆ ಒಳಗಾಗಬೇಕಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ಹೇಳಿದ್ದಾರೆ.

ನೋಟನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಘೋಷಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿರ್ಧಾರವು ಕರೆನ್ಸಿ ನಿರ್ವಹಣೆಯ ಭಾಗವಾಗಿದೆ ಎಂದಿದ್ದಾರೆ.

ಮುದ್ರಣ ಆಗಿರುವ ನೋಟುಗಳ ಪ್ರಮಾಣವು ಅವಶ್ಯಕತೆಗಿಂತಲೂ ಹೆಚ್ಚಿಗೆ ಇದೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಆರ್‌ಬಿಐ ಬಳಿಯಷ್ಟೇ ಅಲ್ಲದೆ ಬ್ಯಾಂಕ್‌ಗಳು ನಿರ್ವಹಿಸುತ್ತಿರುವ ಕರೆನ್ಸಿ ಚೆಸ್ಟ್‌ಗಳಲ್ಲಿಯೂ ಕರೆನ್ಸಿಗಳ ದಾಸ್ತಾನು ಬೇಕಾದಷ್ಟು ಇದೆ. ವ್ಯವಸ್ಥೆಯಲ್ಲಿ ಇರುವ ನಗದು ಕುರಿತು ನಿತ್ಯವೂ ಮೇಲ್ವಿಚಾರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಚಲಾವಣೆಯಲ್ಲಿ ಇರುವ ₹2 ಸಾವಿರ ಮುಖಬೆಲೆಯ ನೋಟುಗಳಲ್ಲಿ ಬಹುಪಾಲು ನೋಟುಗಳು ಸೆಪ್ಟೆಂಬರ್‌ 30ರ ವೇಳೆಗೆ ಬ್ಯಾಂಕ್‌ಗಳಲ್ಲಿ ಜಮಾ ಆಗುವ ನಿರೀಕ್ಷೆ ಇದೆ ಎಂದು ದಾಸ್‌ ಹೇಳಿದ್ದಾರೆ.

2016ರಲ್ಲಿ ನೋಟು ರದ್ದತಿ ಘೋಷಣೆ ಮಾಡಿದಾಗ ಚಲಾವಣೆಯಿಂದ ಹಿಂಪಡೆದ ಕರೆನ್ಸಿ ನೋಟುಗಳಿಗೆ ಬದಲಾಗಿ ₹2 ಸಾವಿರದ ನೋಟನ್ನು ಪರಿಚಯಿಸಲಾಯಿತು ಎಂದು ಹೇಳಿದ್ದಾರೆ.

₹50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಬ್ಯಾಂಕ್‌ಗೆ ಜಮಾ ಮಾಡಲು ಪ್ಯಾನ್‌ ನೀಡಬೇಕು. ₹2 ಸಾವಿರದ ನೋಟನ್ನು ಖಾತೆ ಜಮಾ ಮಾಡುವಾಗ ಸಹ ಈ ನಿಯಮ ಅನ್ವಯವಾಗುತ್ತದೆ ಎಂದು ದಾಸ್‌ ತಿಳಿಸಿದ್ದಾರೆ.

ನೋಟು ಬದಲಿಸಿಕೊಳ್ಳಲು ಜನರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೂ ಆರ್‌ಬಿಐ ಸಲಹೆ ನೀಡಿದೆ.

₹2 ಸಾವಿರದ ಮುಖಬೆಲೆಯ ನೋಟುಗಳ ಕಾನೂನು ಮಾನ್ಯತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ದಾಸ್ ಅವರು, ‘ಇದರ ಕಾನೂನು ಮಾನ್ಯತೆಯು ಮುಂದುವರಿಯಲಿದೆ. ಬ್ಯಾಂಕ್‌ಗೆ ಎಷ್ಟು ನೋಟುಗಳು ಹಿಂದುರುಗಲಿವೆ ಎನ್ನುವುದನ್ನು ನಾವು ಕಾದು ನೋಡುತ್ತೇವೆ. ಸೆಪ್ಟೆಂಬರ್‌ 30ರ ನಂತರ ಏನಾಗಲಿದೆ ಎನ್ನುವ ಕುರಿತು ಊಹೆ ಆಧರಿಸಿದ ಉತ್ತರವನ್ನು ನಾನು ನೀಡುವುದಿಲ್ಲ’ ಎಂದು ಹೇಳಿದ್ದಾರೆ.

₹1 ಸಾವಿರ ಮುಖಬೆಲೆಯ ನೋಟನ್ನು ಮತ್ತೆ ಪರಿಚಯಿಸುವ ಕುರಿತಾದ ಪ್ರಶ್ನೆಗೆ, ಸದ್ಯದ ಮಟ್ಟಿಗೆ ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ದಾಸ್‌ ಸ್ಪಷ್ಟಪಡಿಸಿದ್ದಾರೆ.

‘ಬ್ಯಾಂಕ್‌ಗೆ ಎಷ್ಟು ನೋಟುಗಳು ಹಿಂದುರುಗಲಿವೆ ಎನ್ನುವುದನ್ನು ನಾವು ಕಾದು ನೋಡುತ್ತೇವೆ. ಸೆಪ್ಟೆಂಬರ್‌ 30ರ ನಂತರ ಏನಾಗಲಿದೆ ಎನ್ನುವ ಕುರಿತು ಊಹೆ ಆಧರಿಸಿದ ಉತ್ತರವನ್ನು ನಾನು ನೀಡುವುದಿಲ್ಲ’ ಎಂದು ಹೇಳಿದ್ದಾರೆ.

₹1 ಸಾವಿರ ಮುಖಬೆಲೆಯ ನೋಟನ್ನು ಮತ್ತೆ ಪರಿಚಯಿಸುವ ಕುರಿತಾದ ಪ್ರಶ್ನೆಗೆ, ಸದ್ಯದ ಮಟ್ಟಿಗೆ ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ದಾಸ್‌ ಸ್ಪಷ್ಟಪಡಿಸಿದ್ದಾರೆ.

***

' ಚಲಾವಣೆಯಲ್ಲಿ ಇರುವ ಒಟ್ಟು ಕರೆನ್ಸಿಯಲ್ಲಿ ₹2 ಸಾವಿರದ ನೋಟುಗಳ ಪ್ರಮಾಣ ಶೇ 10.8ರಷ್ಟು ಮಾತ್ರ. ಹೀಗಾಗಿ ಆರ್ಥಿಕತೆಯ ಮೇಲೆ ಅದರ ಪರಿಣಾಮವು ಅತ್ಯಲ್ಪ ಮಟ್ಟದ್ದಾಗಿರಲಿದೆ'

-ಶಕ್ತಿಕಾಂತ ದಾಸ್‌ ಆರ್‌ಬಿಐ ಗವರ್ನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.