ADVERTISEMENT

ವಾಣಿಜ್ಯ, ಹಣಕಾಸು ವಿಷಯಗಳ ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 12 ಮೇ 2020, 19:45 IST
Last Updated 12 ಮೇ 2020, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮಚಂದ್ರರಾವ್‌, ಬೆಂಗಳೂರು

ವಯಸ್ಸು 85. ನಾನು, ನನ್ನ ಗೆಳೆಯನ ಸಾಲಕ್ಕೆ ಜಾಮೀನು ಹಾಕಿದೆ. ಆತ ಮೂರು ವರ್ಷ ಕಳೆದರೂ ಸಾಲ ತೀರಿಸದೇ ಇರುವುದರಿಂದ ಬ್ಯಾಂಕ್‌ನವರು ನನ್ನ ಮನೆಯನ್ನು ₹ 1.25 ಕೋಟಿಗೆ ಹರಾಜು ಮಾಡಿದರು. ಇದು ಎರಡು ಎರಡು ವರ್ಷಗಳ ಹಿಂದೆ ನಡೆಯಿತು. ನನ್ನ ಆಸ್ತಿ ನಿಜವಾದ ಬೆಲೆ ₹ 2 ಕೋಟಿ. ಬ್ಯಾಂಕ್‌ನ ವಕೀಲರ ಹತ್ತಿರದ ಸಂಬಂಧಿಕರಿಗೆ ಆಸ್ತಿ ಹರಾಜಾಗಿ ನನಗೆ ಅನ್ಯಾಯವಾಗಿದೆ. ಕಾನೂನು ಪ್ರಕಾರ ಅಥವಾ ಬ್ಯಾಂಕ್‌ ಚೇರ್‌ಮನ್‌ ಮೂಖಾಂತರ ನನಗೆ ನ್ಯಾಯ ದೊರೆಯಬಹುದೇ ತಿಳಿಸಿ.

ಉತ್ತರ: ನಿಮಗೆ ಅನ್ಯಾಯವಾಗಿದೆ ಎಂದು ನೀವು ಪ್ರತಿಪಾದಿಸಿದರೂ ನೀವು ಜಾಮೀನು ಹಾಕಿರುವುದರಿಂದ ಬ್ಯಾಂಕ್‌ನವರು ಕೈಗೊಂಡ ಕ್ರಮ ಸರಿ ಇರುತ್ತದೆ. ಹರಾಜು ಮಾಡುವಾಗ ಸ್ಥಿರ ಆಸ್ತಿ ಬೆಲೆಯನ್ನು ಸ್ವತಂತ್ರ ಎಂಜಿನಿಯರ್‌ನಿಂದ ಬೆಲೆ ಕಟ್ಟಿಸುತ್ತಾರೆ. ನೀವು ಜಾಮೀನು ಹಾಕಿರುವುದರಿಂದ ಸಾಲ ಸುಸ್ತಿಯಾದಾಗ ನಿಮ್ಮ ಸ್ಥಿರ ಆಸ್ತಿಯನ್ನು ಬ್ಯಾಂಕ್‌ನವರು ಹರಾಜು ಹಾಕಿರುವ ವಿಚಾರ ಹಾಗೂ ನೀವು ತಿಳಿಸಿದಂತೆ ಹರಾಜಿನಲ್ಲಿ ಬ್ಯಾಂಕ್‌ ವಕೀಲರ ಸಂಬಂಧಿಗಳಿಗೆ ಹರಾಜಾದ ವಿಷಯ, ನೀವು ಕಾನೂನು ಸಮರ ಕೈಗೊಳ್ಳುವಲ್ಲಿ ಅಥವಾ ಬ್ಯಾಂಕ್‌ನ ಅಧ್ಯಕ್ಷರನ್ನು ಭೇಟಿಯಾಗುವ ವಿಚಾರ ಫಲಕಾರಿಯಾಗದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದೇ ವೇಳೆ ನಿಮಗೆ ಅನ್ಯಾಯವಾಗಿರುವುದು ನನಗೆ ತುಂಬಾ ನೋವು ತಂದಿದೆ. ಬಹಳಷ್ಟು ಜನರಿಗೆ ಜಾಮೀನಿನ ನಿಜವಾದ ಅರ್ಥ ತಿಳಿದಿಲ್ಲ. ಇದು ಒಂದು ಸಾಕ್ಷಿ ಇರಬಹುದು ಎಂದು ಮೋಸಹೋಗುತ್ತಾರೆ. ಈ ವಿಚಾರದಲ್ಲಿ ವಿದ್ಯಾವಂತರೂ ಹೊರತಾಗಿಲ್ಲ. ಜಾಮೀನು ನೀಡುವಾಗ ಎಚ್ಚರ ಇರಲಿ.

ADVERTISEMENT

–ಚಂದ್ರಮತಿ, ಸಂತೆಪೇಟೆ, ಹೊಸನಗರ

ನಾನು ಬ್ಯಾಂಕ್‌ನಲ್ಲಿ ಬೆಳೆಸಾಲ ಪಡೆದಿದ್ದೇನೆ. ಸಕಾಲದಲ್ಲಿ ತೀರಿಸಿದ್ದೇನೆ. ಆದರೆ ಪಾಣಿಯಲ್ಲಿ ಸಾಲ ಇದೆ ಎಂದೇ ತೋರಿಸುತ್ತಿದೆ. ಕಳೆದೆರಡು ವರ್ಷ ಸಾಲ ಪಡೆಯಲಿಲ್ಲ. ಈಗ ಗೃಹ ಸಾಲ ಬೇಕಾಗಿದೆ. ನನಗೆ ಸಾಲ ಸಿಗಬಹುದೇ ತಿಳಿಸಿ.

ಉತ್ತರ: ನೀವು ಬ್ಯಾಂಕ್‌ ಸಾಲ ಮರುಪಾವತಿಸಿದ ತಕ್ಷಣ ಸಾಲ ತೀರಿಸಿದ ಪುರಾವೆಯನ್ನು ಬ್ಯಾಂಕ್‌ನಿಂದ ಪಡೆಯಬೇಕಾಗಿತ್ತು. ಈ ಸರ್ಟಿಫಿಕೇಟ್‌ ಆಧಾರದ ಮೇಲೆ ವಿಲೇಜ್‌ ಅಕೌಂಟೆಟ್ ‌ಅವರು ಪಾಣಿಯಲ್ಲಿ ಭೋಜ ವಜಾ ಮಾಡುತ್ತಾರೆ. ತಕ್ಷಣ ಬ್ಯಾಂಕ್‌ನವರಲ್ಲಿ ವಿಚಾರ ತಿಳಿಸಿ ಸರಿಪಡಿಸಿಕೊಂಡು ಸಾಲ ಪಡೆಯಿರಿ. ಓದುಗರಿಗೊಂದು ಕಿವಿಮಾತು. ಸ್ಥಿರ ಆಸ್ತಿ ಬ್ಯಾಂಕ್‌ಗೆ ಅಡಮಾನ ಮಾಡಿ, ಜೀವ ವಿಮೆ ಪಾಲಿಸಿ ಒತ್ತೆ ಇಟ್ಟು, ಠೇವಣಿ ಬಾಂಡ್‌ನಿಂದ ಸಾಲ ಪಡೆಯುವಾಗ ಆರ್ಥಿಕ ಸಂಸ್ಥೆಗಳು ಕ್ರಮವಾಗಿ ಅಡಮಾನ ಮಾಡಿದಾಗ ಆಸ್ತಿಯ ಮೇಲೆ, ಜೀವವಿಮೆ ಪಾಲಿಸಿ ಪಡೆದಾಗ ಜೀವ ವಿಮೆ ಪಾಲಿಸಿಯ ಮೇಲೆ, ಠೇವಣಿ ಸಾಲದಲ್ಲಿ ಠೇವಣಿ ಬಾಂಡಿನ ಮೇಲೆ ತಮ್ಮ ಭೋಜವನ್ನು ಮಾಡಿಕೊಳ್ಳುತ್ತಾರೆ. ಸಾಲ ಹಿಂದಿರುಗಿಸಿದ ತಕ್ಷಣ ಬ್ಯಾಂಕ್‌ನಿಂದ ಸರ್ಟಿಫಿಕೇಟ್‌ ಪಡೆದು ಬ್ಯಾಂಕ್‌ನ ಭೋಜವನ್ನು ವಜಾ ಮಾಡಿಸಿಕೊಳ್ಳಬೇಕು. ಹೀಗೆ ಮಾಡದೇ ಇದ್ದರೆ ಸಾಲ ತೀರಿಸಿದ ನಂತರವೂ ನೀವು ಕೊಟ್ಟ ಆಧಾರ ಬ್ಯಾಂಕ್‌ನ ಹೆಸರಿನಲ್ಲಿಯೇ ಇರುತ್ತದೆ. ಹೀಗೆ ವರ್ಷಗಳು ಸಂದರೆ ನೀವು ತೊಂದರೆಗೆ ಒಳಗಾಗುತ್ತೀರಿ. ತಿಳಿದಿರಲಿ. 3–4 ವರ್ಷಕ್ಕೊಮ್ಮೆ ಮ್ಯಾನೇಜರ್‌, ಸಿಬ್ಬಂದಿ ವರ್ಗದವರು ವರ್ಗಾವಣೆ ಆಗುವುದರಿಂದ ತಪ್ಪನ್ನು ಸರಿಪಡಿಸಿಕೊಳ್ಳುವುದು ಮುಂದೆ ಕಷ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.