ಬೆಂಗಳೂರು: ಸ್ಥಳೀಯ ಆಡಳಿತಗಳು ವಿಧಿಸುವ ತೆರಿಗೆಯಲ್ಲಿನ ವ್ಯತ್ಯಾಸದಿಂದ ಉದ್ಯಮಗಳಿಗೆ ಉಂಟಾಗುವ ತೊಂದರೆ ನಿವಾರಿಸುವ ಸಲುವಾಗಿ ತಿಂಗಳೊಳಗೆ ಏಕರೂಪದ ತೆರಿಗೆ ಆಕರಣೆ ನೀತಿ ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೆಷ್ಟೋ ಕಡೆಗಳಲ್ಲಿ ಕೈಗಾರಿಕಾ ಪ್ರದೇಶಗಳು ಉದ್ಯಮಗಳಿಗೆ ಇನ್ನೂ ಹಸ್ತಾಂತರವಾಗಿಲ್ಲ, ಆದರೆ ಸ್ಥಳೀಯಾಡಳಿತ ಸಂಸ್ಥೆಗಳಿಂದ ತೆರಿಗೆ ಆಕರಣೆ ಮಾಡಲಾಗುತ್ತಿದೆ, ಇನ್ನು ಕೆಲವು ಕಡೆ ನಿವೇಶನ ವಾಪಸ್ ಪಡೆಯುವ ಬಗ್ಗೆ ವಾರೆಂಟ್ ನೀಡಿದ ಪ್ರಸಂಗವೂ ಇದೆ. ಉದ್ಯಮಗಳಿಗೆ ಇದರಿಂದ ಬಹಳ ಆತಂಕದ ಸ್ಥಿತಿ ಇದ್ದು, ಇದನ್ನು ನಿವಾರಿಸಬೇಕಾಗಿದೆ.
‘ತೆರಿಗೆ ನೀತಿ ಕುರಿತು ಶೀಘ್ರ ಸಂಪುಟ ಸಭೆ ಟಿಪ್ಪಣಿ ಸಿದ್ಧಪಡಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಲಾಗುವುದು, ತಿಂಗಳೊಳಗೆ ಅದಕ್ಕೆ ಒಪ್ಪಿಗೆ ಪಡೆದು ನೀತಿ ರೂಪಿಸುವ ಗುರಿ ಇದೆ, ಮುಂಬರುವ ಕೈಗಾರಿಕಾ ನೀತಿಯಲ್ಲೂ ಇದನ್ನು ಸೇರಿಸಲಾಗುವುದು. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳಿಗೆ ಹೊಸ ಕೈಗಾರಿಕಾ ವಾತಾವರಣ ನಿರ್ಮಿಸುವಲ್ಲಿ ಈ ನೀತಿ ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಲು ಇದೇ 23ರಂದು ಮುಂಬೈನಲ್ಲಿ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.