ADVERTISEMENT

ಆರ್‌ಬಿಐ–ಸರ್ಕಾರದ ಸಂಘರ್ಷಕ್ಕೆ ಮಾರುಕಟ್ಟೆ ಅರ್ಥವ್ಯವಸ್ಥೆ ಕಾರಣ: ವಿರಲ್ ಆಚಾರ್ಯ

ಪಿಟಿಐ
Published 2 ಆಗಸ್ಟ್ 2020, 21:36 IST
Last Updated 2 ಆಗಸ್ಟ್ 2020, 21:36 IST
ವಿರಲ್‌ ಆಚಾರ್ಯ
ವಿರಲ್‌ ಆಚಾರ್ಯ    

ಮುಂಬೈ: ರಾಷ್ಟ್ರೀಕೃತ ವ್ಯವಸ್ಥೆಯಿಂದ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಆಗುವತ್ತ ಹೊರಳಿಕೊಂಡಿದ್ದು ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಡುವೆ ಸಂಘರ್ಷಕ್ಕೆ, ಆರ್‌ಬಿಐನ ಸ್ವಾತಂತ್ರ್ಯದ ಕುರಿತ ಪ್ರಶ್ನೆಗಳಿಗೆ ಕಾರಣ ಎಂದು ವಿರಲ್‌ ಆಚಾರ್ಯ ಹೇಳಿದರು. ಆಚಾರ್ಯ ಅವರು ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್.

‘ರಾಷ್ಟ್ರೀಕೃತ ಅರ್ಥವ್ಯವಸ್ಥೆ ಹೊಂದಿದ್ದ ನಾವು ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಆಗುವತ್ತ ನಡೆದಿದ್ದೇವೆ. ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವ್ಯವಸ್ಥೆಯು ಹಿಂದೂ ಅವಿಭಕ್ತ ಕುಟುಂಬದಂತೆ ಇತ್ತು. ಅಲ್ಲಿ ಎಲ್ಲರ ಅಗತ್ಯಗಳನ್ನು ಸುಲಭವಾಗಿ ನಿಭಾಯಿಸಲಾಗುತ್ತಿತ್ತು’ ಎಂದು ಆಚಾರ್ಯ ಅವರು ಆರ್‌ಬಿಐನ ಮಾಜಿ ಗವರ್ನರ್ ವೈ.ವಿ. ರೆಡ್ಡಿ ಅವರನ್ನು ಉಲ್ಲೇಖಿಸಿ ಹೇಳಿದರು.

‘ಈ ಅವಿಭಕ್ತ ಕುಟುಂಬದ ವ್ಯವಸ್ಥೆ ಇಂದಿನ ಅರ್ಥವ್ಯವಸ್ಥೆಯಲ್ಲಿ ಇಲ್ಲ. ಇಲ್ಲಿ ಮಾರುಕಟ್ಟೆಗಳಿವೆ, ಖಾಸಗಿ ವಲಯದ ಕಂಪನಿಗಳು ದೇಶದ ಒಳಗಿನಿಂದಲೂ ಸಾಲ ಎತ್ತುತ್ತಿವೆ, ಹೊರಗಿನಿಂದಲೂ ಸಾಲ ತರುತ್ತಿವೆ. ಅರ್ಥವ್ಯವಸ್ಥೆಯ ಸ್ವರೂಪದಲ್ಲಿ ಬದಲಾವಣೆ ಆಗು ವುದರ ಜೊತೆಗೆ, ದೇಶದ ಜನರ ಉಳಿತಾಯ ಪ್ರಮಾಣದಲ್ಲಿ ಕೂಡ ಹಿಂದಿನ ದಶಕದಲ್ಲಿ ಇಳಿಕೆ ಆಗಿದೆ. ಇದು ಸಂಪನ್ಮೂಲಗಳ ಲಭ್ಯತೆಯನ್ನು ಕಡಿಮೆ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.