ನವದೆಹಲಿ: ದೇಶದ ಷೇರುಪೇಟೆಯ ವಾರದ ವಹಿವಾಟಿನ ಮೆಲೆ ಹಣದುಬ್ಬರದ ಅಂಕಿಅಂಶ ಹಾಗೂ ಕೈಗಾರಿಕೆಗಳ ಬೆಳವಣಿಗೆಯು ಹೆಚ್ಚಿನ ಪ್ರಭಾವ ಬೀರಲಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶ ಮತ್ತು ಜಾಗತಿಕ ವಿದ್ಯಮಾನಗಳು ಸಹ ಸೂಚ್ಯಂಕದ ಚಲನೆಯ ದಿಕ್ಕನ್ನು ನಿರ್ಧರಿಸಲಿವೆ ಎಂದೂ ಹೇಳಿದ್ದಾರೆ.
ಅಮೆರಿಕ–ಚೀನಾ ಬಿಕ್ಕಟ್ಟು ಮತ್ತು ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಷೇರುಪೇಟೆಯು ಚಂಚಲವಾಗಿಯೇ ಮುಂದುವರಿಯಲಿದೆ. ತ್ರೈಮಾಸಿಕ ಫಲಿತಾಂಶ ಇರುವುದರಿಂದ ನಿರ್ದಿಷ್ಟ ಷೇರುಗಳ ಬೆಲೆಯಲ್ಲಿ ಏರಿಳಿತ ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಆರ್ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಹೀಗಾಗಿ ಎಲ್ಲರ ದೃಷ್ಟಿಯೂ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಮೇಲೆ ಕೇಂದ್ರೀಕರಿಸಿದೆ. ಈ ವಾರವೇ ಅಂಕಿ–ಅಂಶಗಳು ಹೊರಬೀಳಲಿವೆ.
ಫಲಿತಾಂಶ: ಬ್ಯಾಂಕ್ ಆಫ್ ಬರೋಡಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬಿಪಿಸಿಎಲ್, ಹೀರೊಮೊಟೊಕಾರ್ಪ್, ಎಂಆರ್ಎಫ್ ಮತ್ತು ಎನ್ಟಿಪಿಸಿ ಕಂಪನಿಗಳು ತಮ್ಮ ಹಣಕಾಸು ಸಾಧನೆ ಪ್ರಕಟಿಸಲಿವೆ.
ಈ ಎಲ್ಲಾ ವಿದ್ಯಮಾನಗಳ ಜತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗಲಿರುವ ಏರಿಳಿತ, ಡಾಲರ್ ಎದುರು ರೂಪಾಯಿ ಮೌಲ್ಯ ವ್ಯತ್ಯಯವೂ ಹೂಡಿಕೆ ಚಟುವಟಿಕೆಯ ಮೇಲೆ ಪ್ರಭಾವ ಬೀರಲಿವೆ.
ಹಿಂದಿನ ವಾರದ ವಹಿವಾಟು
1.15%:ಬಿಎಸ್ಇ ಏರಿಕೆ
1.26%: ನಿಫ್ಟಿ ಏರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.