ಮುಂಬೈ: ದೇಶದ ಷೇರುಪೇಟೆಯಲ್ಲಿ ಸತತ ನಾಲ್ಕನೇ ದಿನವಾದ ಶುಕ್ರವಾರವೂ ಗೂಳಿಯ ನಾಗಾಲೋಟ ಮುಂದುವರಿಯಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಈ ಸಮೀಕ್ಷೆಯು 2025–26ನೇ ಸಾಲಿನಲ್ಲಿ ಅಭಿವೃದ್ಧಿಪರ ಬಜೆಟ್ ಮಂಡನೆಯಾಗಲಿದೆ ಎಂಬ ಸುಳಿವು ನೀಡಿದೆ. ಇದು ಸೂಚ್ಯಂಕಗಳು ಏರಿಕೆಯಾಗಲು ಸಹಕಾರಿಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 740 ಅಂಶ ಏರಿಕೆ ಕಂಡು 77,500 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 846 ಅಂಶ ಏರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 258 ಅಂಶ ಹೆಚ್ಚಳ ಕಂಡು, 23,508 ಅಂಶಗಳಲ್ಲಿ ಸ್ಥಿರಗೊಂಡಿತು.
ಸೆನ್ಸೆಕ್ಸ್ ಗುಚ್ಛದಲ್ಲಿನ ಎಲ್ ಆ್ಯಂಡ್ ಟಿ ಕಂಪನಿ ಶೇ 4.31 ಮತ್ತು ನೆಸ್ಲೆ ಇಂಡಿಯಾ ಷೇರಿನ ಮೌಲ್ಯದಲ್ಲಿ ಶೇ 4.25ರಷ್ಟು ಏರಿಕೆಯಾಗಿದೆ. ಇಂಡಸ್ ಇಂಡ್ ಬ್ಯಾಂಕ್, ಟೈಟನ್, ಟಾಟಾ ಮೋಟರ್ಸ್, ಟಾಟಾ ಸ್ಟೀಲ್, ಐಟಿಸಿ ಮತ್ತು ಮಾರುತಿ ಸುಜುಕಿ ಷೇರಿನ ಮೌಲ್ಯ ಹೆಚ್ಚಳವಾಗಿದೆ.
ಐಟಿಸಿ ಹೋಟೆಲ್ಸ್, ಭಾರ್ತಿ ಏರ್ಟೆಲ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್ ಮತ್ತು ಐಸಿಐಸಿಐ ಬ್ಯಾಂಕ್ನ ಷೇರಿನ ಮೌಲ್ಯ ಕುಸಿದಿದೆ.
ದೇಶೀಯ ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂಪಡೆಯುವುದು ನಿಂತಿಲ್ಲ. ಗುರುವಾರದ ವಹಿವಾಟಿನಲ್ಲಿ ₹4,582 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.