ಮುಂಬೈ: ಐ.ಟಿ, ಎಫ್ಎಂಸಿಜಿ ಮತ್ತು ಬ್ಯಾಂಕಿಂಗ್ ಷೇರುಗಳು ಲಾಭಗಳಿಕೆಯ ಒತ್ತಡಕ್ಕೆ ಒಳಗಾದ ಕಾರಣದಿಂದಾಗಿ ಷೇರು ಪೇಟೆಯಲ್ಲಿ ನಾಲ್ಕು ದಿನಗಳಿಂದ ನಡೆದಿದ್ದ ಸೂಚ್ಯಂಕಗಳ ಓಟಕ್ಕೆ ಬುಧವಾರ ತಡೆಬಿದ್ದಿದೆ.
ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿರುವುದು ಹಾಗೂ ಜಾಗತಿಕ ವಿದ್ಯಮಾನಗಳ ಪರಿಣಾಮಕ್ಕೆ ಒಳಗಾಗಿಯೂ ನಕಾರಾತ್ಮಕ ವಹಿವಾಟು ನಡೆಯಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 150 ಅಂಶ ಇಳಿಕೆ ಕಂಡು 53,027ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 51 ಅಂಶ ಇಳಿಕೆಯಾಗಿ 15,799ರಲ್ಲಿ ವಹಿವಾಟು ಅಂತ್ಯವಾಯಿತು.
‘ಹಣದುಬ್ಬರವು ಅನಿಯಂತ್ರಿತವಾಗಿದ್ದು, ನಿರಂತರವಾಗಿ ಏರಿಕೆ ಕಾಣುತ್ತಿರುವುದರಿಂದ ಗ್ರಾಹಕರ ವಿಶ್ವಾಸವು ತೀವ್ರವಾಗಿ ಕುಸಿಯುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
‘ಸೌದಿ ಅರೇಬಿಯಾದಂತಹ ಪ್ರಮುಖ ತೈಲ ಉತ್ಪಾದಕ ದೇಶಗಳಿಂದ ಅಲ್ಪಾವಧಿಯಲ್ಲಿ ಕಚ್ಚಾ ತೈಲ ಉತ್ಪಾದನೆ ಹೆಚ್ಚಳ ಮಾಡಲು ಸಾಧ್ಯವಾಗದೇ ಇರುವುದರಿಂದ ಕಚ್ಚಾ ತೈಲ ದರ ಏರಿಕೆ ಆಗುತ್ತಿದೆ. ಇದರ ಜೊತೆಗೆ ಜಾಗತಿಕ ಷೇರುಪೇಟೆಗಳಲ್ಲಿ ಇಳಿಕೆಯ ಪರಿಣಾಮಗಳನ್ನೂ ಭಾರತವು ಸಹಿಸಿಕೊಳ್ಳಬೇಕಾಗಿದೆ. ಹೀಗಿದ್ದರೂ ಪಿಎಸ್ಯು, ಲೋಹ ಹಾಗೂ ತೈಲ ಮತ್ತು ಅನಿಲ ಕಂಪನಿಗಳ ಷೇರುಗಳ ಗಳಿಕೆಯಿಂದಾಗಿ ದೇಶಿ ಮಾರುಕಟ್ಟೆಯು ಇನ್ನಷ್ಟು ನಷ್ಟ ಕಾಣುವುದು ತಪ್ಪಿತು’ ಎಂದು ನಾಯರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.