ADVERTISEMENT

ಬೆರಗಿನ ಬೆಳಕು:  ಮೂಲದಲ್ಲಿ ಎರಡೂ ಒಂದೇ

ಡಾ. ಗುರುರಾಜ ಕರಜಗಿ
Published 18 ಮೇ 2022, 19:45 IST
Last Updated 18 ಮೇ 2022, 19:45 IST
ಡಿವಿಜಿ
ಡಿವಿಜಿ   

ಸರಿಗೆಪಂಚೆಯೊ ಹೊದಿಕೆ, ಹರಕುಚಿಂದಿಯೊ ಮೈಗೆ |
ಪರಮಾನ್ನ ಭೋಜನವೊ, ತಿರುಪೆಯಂಬಲಿಯೋ ||
ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ |
ಕರುಬು ಕೊರಗೇತಕೆಲೊ – ಮಂಕುತಿಮ್ಮ || 631 ||

ಪದ-ಅರ್ಥ: ಸರಿಗೆ ಪಂಚೆ=ಬೆಲೆಬಾಳುವ ರೇಷ್ಮೆಯ ಪಂಚೆ, ತಿರುಪೆಯಂಬಲಿಯೊ=ತಿರುಪೆಯ(ಭಿಕ್ಷೆ ಬೇಡಿತಂದ)+ಅಂಬಲಿಯೊ, ಬಡವರಿರ್ವರುಮೊಂದೆ=ಬಡವರು+ಇರ್ವರುಮ್ (ಇಬ್ಬರೂ)+ಒಂದೆ, ಕರುಬು=ಹೊಟ್ಟೆಕಿಚ್ಚು, ಕೊರಗೇತಕೆಲೊ=ಕೊರಗು(ಚಿಂತೆ)+ಏತಕೆ+ಎಲೊ.

ವಾಚ್ಯಾರ್ಥ: ಹೊದ್ದುಕೊಳ್ಳುವುದಕ್ಕೆ ಸರಿಗೆ ಪಂಚೆಯೋ, ಹರಕು ಚಿಂದಿಯೊ, ಊಟಕ್ಕೆ ಪರಮಾನ್ನವೊ, ಭಿಕ್ಷೆಬೇಡಿ ತಂದ ಅಂಬಲಿಯೊ, ಒಟ್ಟಿನ ಪರಿಣಾಮದಲ್ಲಿ ಶ್ರೀಮಂತ, ಬಡವ ಇಬ್ಬರೂ ಒಂದೇ. ಆದ್ದರಿಂದ ಹೊಟ್ಟೆಕಿಚ್ಚು, ಚಿಂತೆ ಏತಕ್ಕೆ?

ADVERTISEMENT

ವಿವರಣೆ: ಕನಕದಾಸರ ಒಂದು ಅದ್ಭುತವಾದ ಕೀರ್ತನೆಯಿದೆ. ಆಶೋಕವನಕ್ಕೆ ಬಂದ ಆಂಜನೇಯನನ್ನು ತಾಯಿಸೀತೆ ಪ್ರೀತಿಯಿಂದ ಮಾತನಾಡಿಸಿ, ‘ಎನ್ನ ಕಂದ, ಹಳ್ಳಿಯ ಹನುಮ, ಚೆನ್ನಾಗೈದಾರ ಲಕ್ಷ್ಮಣದೇವರು?’ ಎಂದು ಕೇಳುತ್ತಾಳೆ. ಅದಕ್ಕೆ ಪ್ರತಿಯಾಗಿ ಆಂಜನೇಯ ಹೇಳುವ ಮಾತುಗಳು
ಮನನೀಯವಾದವುಗಳು.

ತುಪ್ಪ ಪಂಚಾಮೃತವಂದು, ಅಡವಿಗಡ್ಡೆಗಳಿಂದು,
ಕರ್ಪೂರವೀಳ್ಯವಂದು, ಕುರುಕು ಇಂದು.
ಸುಪ್ಪತ್ತಿಗೆ ಮಂಚವಂದು, ಹುಲ್ಲು ಹಾಸಿಗೆ ಇಂದು,
ಶ್ರೀಪತಿ ರಾಘವಕ್ಷೇಮದಲೈದಾರೆ || 1 ||

ನವವಸ್ತುಗಳು ಅಂದು, ನಾರಸೀರೆಗಳಿಂದು,
ಹೂವಿನ ಗಂಟು ಅಂದು, ಗಂಟಾದ ಜಡೆಯಿಂದು,
ಜವ್ವಾಜಿಕತ್ತುರಿಯಂದು, ಭಸಿತಧೂಳಿ ಇಂದು.
ಶ್ರೀವರ ರಾಘವ ಕ್ಷೇಮದಲೈದಾರೆ || 2 ||

ಕನಕರಥಗಳು ಅಂದು, ಕಾಲುನಡಿಗೆ ಇಂದು,
ಘನಛತ್ರಚಾಮರವಂದು, ಬಿಸಿಲು ಇಂದು,
ಸನಕಾದಿಗಳೋಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲೈದಾರೆ || 3 ||

ಮಹಾನ್ ಜ್ಞಾನಿ ಹನುಮಂತ ಹೇಳುವ ರೀತಿ ನೋಡಿ. ಹಿಂದೆ ರಾಜಕುಮಾರನಾಗಿದ್ದ ಶ್ರೀರಾಮ ಮತ್ತು ವನವಾಸಿ ರಾಮನ ಸ್ಥಿತಿಗಳನ್ನು ಹೋಲಿಸಿ ಹೇಳುತ್ತಾನೆ. ಹಿಂದೆ ಅವನಿಗೆ ಇದ್ದದ್ದು, ತುಪ್ಪ ಪಂಚಾಮೃತ, ಕರ್ಪೂರ ವೀಳ್ಯೆ, ಸುಪತ್ತಿಗೆ ಮಂಚ, ನವವಸ್ತ್ರಗಳು, ಪರಿಮಳದ ಹೂವುಗಳು, ಜವ್ವಾಜಿ ಕಸ್ತೂರಿಗಳು, ಕನಕರಥಗಳು, ಘನ ಛತ್ರ ಚಾಮರಗಳು. ಇವು ಅವನ ವೈಭವವನ್ನು ಸಾರಿದರೆ, ಈಗ ಅವನಿಗೆ ಇರುವುವು, ಅಡವಿ ಗಡ್ಡೆಗಳು, ಕುರುಕುತಿಂಡಿ, ಹುಲ್ಲುಹಾಸಿಗೆ, ನಾರಸೀರೆ, ಗಂಟಾದ ಜಡೆ, ಧೂಳು, ಕಾಲು ನಡಿಗೆ, ಬಿಸಿಲು. ಆದರೆ ಶ್ರೀರಾಮ ತುಂಬ ಕ್ಷೇಮವಾಗಿದ್ದಾನೆ. ಹಾಗೆಂದರೆ ಶ್ರೀಮಂತಿಕೆಯೋ, ಅರಣ್ಯವಾಸವೊ, ಶ್ರೀರಾಮನಿಗೆ ಎರಡೂ ಒಂದೇ ಎಂಬುದು ಒಂದರ್ಥವಾದರೆ, ಯಾವುದೇ ಸ್ಥಿತಿಯಲ್ಲಿದ್ದರೂ ಅವನು ಶ್ರೀರಾಮನೇ ಅಲ್ಲವೆ? ಕಗ್ಗದ ಧ್ವನಿಯೂ ಅದೇ. ರೇಷ್ಮೆ ಬಟ್ಟೆಯೋ, ಹರಕುಚಿಂದಿಯೋ, ಪರಮಾನ್ನವೋ, ಭಿಕ್ಷಾನ್ನವೊ, ಅವುಗಳನ್ನು ಅನುಭವಿಸುವವನು ಅದೇ ವ್ಯಕ್ತಿ. ಅವನಲ್ಲಿ ಆತ್ಮಶಕ್ತಿ ಪ್ರಬಲವಾಗಿದ್ದರೆ ಬಾಹ್ಯ ಅವಶ್ಯಕತೆಗಳು ಬದಲಾವಣೆ ಮಾಡಲಾರವು. ಮೂಲದಲ್ಲಿ, ಅವು ಆವರಣಗಳು. ಒಳಗಿರುವ ವಸ್ತು ಮುಖ್ಯ. ಆದ್ದರಿಂದ ಬಾಹ್ಯ ಅಲಂಕಾರಗಳನ್ನು ಕಂಡು ಹೊಟ್ಟೆಕಿಚ್ಚುಪಡುವುದು, ಚಿಂತೆ ಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.