ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕುರಿತು ಇದೇ ಮೊದಲ ಬಾರಿಗೆ ವಿಶೇಷವಾದ ‘ಥೀಮ್ ಗೀತೆ’ಯನ್ನು ಜಿಲ್ಲಾಡಳಿತದಿಂದ ಸಿದ್ಧಪಡಿಸಲಾಗಿದ್ದು, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಪರಿಕಲ್ಪನೆ–ಸಾಹಿತ್ಯ–ನಿರ್ದೇಶನದಲ್ಲಿ ‘ಗೀತೆ’ ಮೂಡಿಬಂದಿದೆ. ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಹಾಡಿದ್ದು, ನೀತು ನಿನಾದ್ ಸಂಗೀತ ನೀಡಿದ್ದಾರೆ. 5.39 ನಿಮಿಷಗಳ ಈ ಗೀತೆಯು ನಾಡಹಬ್ಬದ ವೈಶಿಷ್ಟ್ಯ, ಮಹತ್ವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.
‘ಡ್ರೋನ್’ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಮೈಸೂರಿನ ಸೊಬಗು ಬಿಂಬಿಸುವ ವಿಡಿಯೊಗಳು, ಉತ್ತಮ ಸಂಗೀತದ ಹಿನ್ನೆಲೆಯಲ್ಲಿ ಗೀತೆಯು ವರ್ಣರಂಜಿತವಾಗಿ ಮೂಡಿಬಂದಿದೆ. ಈ ಹಿಂದಿನ ದಸರಾ ಮಹೋತ್ಸವಗಳಲ್ಲಿ ನಡೆದ ಕಾರ್ಯಕ್ರಮಗಳ ವಿಡಿಯೊಗಳನ್ನು ಇದರಲ್ಲಿ ಜೋಡಿಸಲಾಗಿದ್ದು, ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಮೂಲಕ ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ನಾಡಹಬ್ಬಕ್ಕೆ ಸ್ವಾಗತ ಕೋರುವ ಕೆಲಸವನ್ನು ಮಾಡಲಾಗಿದೆ.
ಕರುನಾಡ ಕರುಣೆಯ ಕಡಲಿನಲಿ
ಮೈಸೂರು ಮಮತೆಯ ಮಡಿಲಿನಲಿ
ಕನ್ನಡದ ಸಂಭ್ರಮದ ನಾಡಹಬ್ಬ
ನಾಡದೇವತೆಯ ಸಿರಿ ದಸರಾ ಹಬ್ಬ...
ಎಂದು ಆರಂಭವಾಗುವ ಗೀತೆಯಲ್ಲಿ ‘ಮೈಸೂರಿದು ಕರುನಾಡಿಗೆ ಸಂಸ್ಕೃತಿಯ ಹಿರಿಮೆ, ಪರಂಪರೆಯ ಸಂಭ್ರಮದ ಅಸ್ಮಿತೆಯ ಗರಿಮೆ’ ಎಂದು ಬಣ್ಣಿಸಲಾಗಿದೆ.
‘ಭಾವೈಕ್ಯತೆಯ ಗೂಡಾಗಿದೆ ಭವ್ಯತೆಯ ಊರು, ಸಾಂಸ್ಕೃತಿಕ ವೈಭವದ ಸ್ವರ್ಗವೇ ಇಲ್ಲಿ ಸೂರು, ನವರಾತ್ರಿಯ ಪೂರ್ತಿ ನಮಗೆಲ್ಲವೂ ಸ್ಫೂರ್ತಿ, ಕರುನಾಡಿನ ಪ್ರಗತಿ ಇದು ಜಗದಗಲಕೂ ಕೀರ್ತಿ’ ಎಂಬಿತ್ಯಾದಿ ಅರ್ಥಗರ್ಭಿತ ಸಾಲುಗಳಿವೆ. https://www.youtube.com/watch?v=Wa9xW2Uxs3U ಲಿಂಕ್ನಲ್ಲಿ ಈ ಗೀತೆಯನ್ನು ವಾರ್ತಾ ಇಲಾಖೆಯ ‘ಮೈಸೂರು ವಾರ್ತೆ’ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ದಸರಾ ಕಾರ್ಯಕ್ರಮದ ವೇದಿಕೆಗಳಲ್ಲಿ ಪ್ರಸಾರ ಮಾಡುವ ಮೂಲಕ ಸಾರ್ವಜನಿಕರ ಗಮನಸೆಳೆಯುವಂತೆ ಮಾಡಲು ಯೋಜಿಸಲಾಗಿದೆ. ‘ನೆಟ್ಟಿಗರ’ನ್ನು ತಲುಪುವುದಕ್ಕೂ ಯೋಜಿಸಲಾಗಿದೆ.
‘ನಾಡಹಬ್ಬದ ಪ್ರಚಾರದ ಭಾಗವಾಗಿ ಈ ಬಾರಿ ಥೀಮ್ಗೀತೆ ಸಿದ್ಧಪಡಿಸಿದ್ದೇವೆ. ಮೈಸೂರಿನ ವಿಶೇಷಗಳನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಇದು ನೋಡುಗರು, ಕೇಳುಗರಿಗೆ ಇಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ, ಉತ್ಸವಕ್ಕೆ ಬರುವಂತೆ ಸಾರ್ವಜನಿಕರಿಗೆ ಅಹ್ವಾನ ನೀಡುತ್ತಿದ್ದೇವೆ’ ಎಂದು ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರಮನೆಯ ಅಂಗಳದಿ ಅಂಬಾರಿಯ ಸೊಬಗು, ಮೆರವಣಿಗೆಯ ಸಡಗರದಿ ಜನಮನಗಳ ಮೆರುಗು...’ ಮೊದಲಾದ ಸಾಲುಗಳು ಹಾಡಿನಲ್ಲಿವೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು ಶುಕ್ರವಾರ ಅರಮನೆ ಆವರಣದ ಗ್ರಿಲ್ಗಳಿಗೆ ಮುಸ್ಲಿಂ ಯುವಕರು ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದ್ದು ಕಂಡುಬಂತು
ಸಿದ್ಧತೆ ಜೋರು...
ಸೆ.22ರಿಂದ ಅ.2ರವರೆಗೆ ಆಯೋಜನೆಗೊಂಡಿರುವ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಇದಕ್ಕಾಗಿ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಉದ್ಘಾಟಕರಾದ ಸಾಹಿತಿ ಬಾನು ಮುಷ್ತಾಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ಥಾವರಚಂದ್ ಗೆಹಲೋತ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮಂದಿ ಸಚಿವರು–ಗಣ್ಯರಿಗೆ ಜಿಲ್ಲಾಡಳಿತದಿಂದ ಈಗಾಗಲೇ ಆಹ್ವಾನಪತ್ರಿಕೆ ನೀಡಲಾಗಿದೆ. ಇನ್ನೊಂದೆಡೆ ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚುವುದು ವೃತ್ತಗಳು ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅರಮನೆಯಲ್ಲೂ ಸಿದ್ಧತೆಗಳು ನಡೆಯುತ್ತಿವೆ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೂ ತಾಲೀಮು ಕೊಡಲಾಗುತ್ತಿದೆ. ಉತ್ಸವದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ‘ದಸರಾ ಗೀತೆ’ಯನ್ನು ಹಲವು ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.