ADVERTISEMENT

ದಿನದ ಸೂಕ್ತಿ: ಅಧಿಕಾರ ಶಾಶ್ವತವಲ್ಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 28 ಆಗಸ್ಟ್ 2020, 1:38 IST
Last Updated 28 ಆಗಸ್ಟ್ 2020, 1:38 IST
   

ಅತ್ಯುಚ್ಚಪದಾಧ್ಯಾಸಃ ಪತನಾಯೇತ್ಯರ್ಥಶಾಲಿನಾಂ ಶಂಸತ್‌ ।
ಆಪಾಂಡು ಪತತಿಪತ್ತ್ರಂ ತರೋರಿದಂ ಬಂಧನಗ್ರಂಥೇಃ ।।

ಇದರ ತಾತ್ಪರ್ಯ ಹೀಗೆ:

‘ಮರದ ಬಿಳುಪಾದ ಎಲೆಯು ಮೇಲಿಂದ ಕೆಳಗೆ ಬೀಳುತ್ತದೆ. ಉನ್ನತ ಪದವಿಗೆ ಹೋದವರೆಲ್ಲರೂ ನನ್ನಂತೆಯೇ ಒಂದು ದಿನ ಬೀಳುವರು ಎಂಬ ನೀತಿಯನ್ನು ಅದು ತಿಳಿಸುತ್ತಿದೆ.‘

ADVERTISEMENT

ಜಗತ್ತಿನ ಹಲವು ಸಂಸ್ಕೃತಿಗಳಲ್ಲಿ ಸೃಷ್ಟಿಯ ಬಗ್ಗೆ ಒಂದು ಕಲ್ಪನೆ ಇದೆ. ಇಡಿಯ ಸೃಷ್ಟಿ ಯಾವುದೋ ಒಂದು ದಿನ ನಾಶವಾಗುತ್ತದೆ. ಇದನ್ನೇ ಪ್ರಳಯ ಎನ್ನುವುದು. ನಮ್ಮ ಸಂಸ್ಕೃತಿಯಲ್ಲಂತೂ ಮಹೇಶ್ವರನನ್ನು ಪ್ರಳಯಕಾರಕ ಎಂದೇ ಕಾಣಿಸಲಾಗಿದೆ. ಸೃಷ್ಟಿಯೇ ಒಂದು ದಿನ ಕಣ್ಮರೆಯಾಗುತ್ತದೆ ಎಂದಿರುವಾಗ ಈ ಸೃಷ್ಟಿಯ ಭಾಗವಾಗಿರುವ ವಿವರಗಳು ಶಾಶ್ವತವಾಗಿರಲು ಸಾಧ್ಯವೆ?

ಹೌದು, ಕೆಲವರು ಶಾಶ್ವತ ಎಂದುಕೊಳ್ಳುತ್ತಾರೆ. ‘ನಾವು ಶಾಶ್ವತ, ನಮ್ಮ ಆಸ್ತಿ–ಅಧಿಕಾರ–ಪದವಿಗಳು ಇನ್ನೂ ಶಾಶ್ವತ‘ ಎಂಬ ಧೋರಣೆಯಿಂದ ನಡೆದುಕೊಳ್ಳುತ್ತಿರುತ್ತಾರೆ. ಅಂಥವರಿಗೆ ಸುಭಾಷಿತ ಬುದ್ಧಿಮಾತನ್ನೂ ಎಚ್ಚರಿಕೆಯನ್ನೂ ನೀಡುತ್ತಿದೆ.

ಮರದ ಮೇಲಿರುವ ಎಲೆ ಸಹಜವಾಗಿ ಉದುರಲೇಬೇಕಷ್ಟೆ. ಇದನ್ನೇ ಉದಾಹರಣೆಯಾಗಿ ತೆಗೆದುಕೊಂಡಿದೆ ಸುಭಾಷಿತ. ಮೇಲಿದೆ ಎನ್ನುವ ಕಾರಣದಿಂದ ಮರದ ಎಲೆಗಳು ಶಾಶ್ವತವಾಗಿ ಅಲ್ಲೇ ಇರಲಾರವು; ಬೀಳುವುದು ಪ್ರಕೃತಿಯ ಸಹಜಧರ್ಮ. ಹೀಗೆ ಮೇಲಿಂದ ಬೀಳುವ ಎಲೆ ಒಂದು ಸಂದೇಶವನ್ನು ರವಾನಿಸುತ್ತಿದೆಯಂತೆ. ಮೇಲೆ ಏರಿದವರು ಕೆಳಗೆ ಬೀಳಲೇಬೇಕು. ಇದೇ ಆ ಸಂದೇಶ.

ಇನ್ನು ಸುಭಾಷಿತ ನಮಗೆ ಕೊಡುತ್ತಿರುವ ಎಚ್ಚರಿಕೆ ಎಂದರೆ: ಮೇಲೆ ಏರಿದ್ದೇವೆ ಎಂದು ಬೀಗಬೇಡಿ. ಅಲ್ಲಿಂದ ಒಂದು ದಿನ ನೀವು ಬೀಳಲೇಬೇಕು.

ಇಲ್ಲಿ ಮೇಲೆ ಎಂದರೆ ಆಧಿಕಾರ, ಪದವಿ. ಕೆಲವರಿಗೆ ಅಧಿಕಾರ ಸಿಕ್ಕ ಕೂಡಲೇ ಇಂದ್ರಪದವಿಯೇ ಸಿಕ್ಕಂತೆ ಎಗರಾಡುತ್ತಾರೆ. ಆದರೆ ಆ ಇಂದ್ರನ ಪದವಿಯೇ ಶಾಶ್ವತವಲ್ಲ. ಇನ್ನು ಅರವತ್ತು ವರ್ಷಕ್ಕೆ ನಿವೃತ್ತಿಯಾಗುವ ಕೆಲಸದಲ್ಲಿ ಸಿಕ್ಕ ಅಧಿಕಾರ ಎಷ್ಟು ದಿನ ಶಾಶ್ವತವಾಗಿದ್ದೀತು? ಐದು ವರ್ಷದ ಚುನಾವಣೆ ತಂದುಕೊಡುವ ಪದವಿ ಎಷ್ಟು ಶಾಶ್ವತವಾಗಿದ್ದೀತು?

ಆದರೆ ನಮಗೆ ಅಧಿಕಾರ–ಪದವಿ ಸಿಕ್ಕಿದ ಕೂಡಲೇ ತಲೆ ಸುತ್ತುತ್ತದೆ; ನೆಟ್ಟಿಗೆ ಅದು ನಿಲ್ಲದು. ನಾನೂ ಶಾಶ್ವತ, ನನ್ನ ಅಧಿಕಾರವೂ ಶಾಶ್ವತ ಎಂಬಂತೆ ಹಾರಾಟ ಶುರುಮಾಡುತ್ತೇವೆ. ನಮ್ಮ ಮೇಲಿನವರ ದಯೆಯಿಂದಲೋ ತಂತ್ರಗಾರಿಕೆಯಿಂದಲೋ ನಮಗೆ ಪದವಿ ಸಿಕ್ಕಿರುತ್ತದೆ. ಆ ದಯೆಯ ಅವಧಿ ಮುಗಿದ ಮೇಲೆ ಅಲ್ಲಿಂದ ಎತ್ತಂಗಡಿ ಖಂಡಿತ ಎಂಬ ವಾಸ್ತವವನ್ನು ಮರೆಯುತ್ತೇವೆ. ಇಷ್ಟು ಮಾತ್ರವಲ್ಲ, ನಾವೇ ಶಾಶ್ವತವಲ್ಲ; ಇನ್ನು ನಮಗೆ ಒದಗಿರುವ ಅಧಿಕಾರ ಶಾಶ್ವತವಾಗಿದ್ದೀತೆ? ನಾವು ಯೋಚಿಸುವುದೇ ಇಲ್ಲ!

ಹೀಗೆಂದು ಪದವಿ–ಅಧಿಕಾರಗಳು ಶಾಶ್ವತವಲ್ಲ ಎಂದು ನಾವು ಕೊರಗುತ್ತಲೂ ಕೂರಬೇಕಾಗಿಲ್ಲ. ಅಧಿಕಾರದಲ್ಲಿದ್ದಷ್ಟು ದಿನ ಪ್ರಾಮಾಣಿಕವಾಗಿ ಸಮಾಜದ ಏಳಿಗೆಗಾಗಿ ಕರ್ತವ್ಯವನ್ನು ನಿರ್ವಹಿಸಿದರೆ ಆಗ ಸಿಗುವ ತೃಪ್ತಿ–ಜನಪ್ರೀತಿಗಳು ನಮ್ಮ ಅಧಿಕಾರದ ಅವಧಿಗಿಂತಲೂ ಹೆಚ್ಚು ದಿನ ಉಳಿಯುತ್ತದೆಯೆನ್ನಿ!‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.