ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ |ನಾಯಕರ ದಂಡು: ಹೆಚ್ಚಿದ ಪ್ರಚಾರದ ಕಾವು

ಸ್ಟಾರ್ ಪ್ರಚಾರಕರ ಭರಾಟೆ, ಮಾತಿನ ಸಮರಕ್ಕೆ ವೇದಿಕೆ ಸಿದ್ಧ

ಬಸವರಾಜ ಹವಾಲ್ದಾರ
Published 27 ಏಪ್ರಿಲ್ 2024, 4:56 IST
Last Updated 27 ಏಪ್ರಿಲ್ 2024, 4:56 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬಾಗಲಕೋಟೆ: ದಕ್ಷಿಣ ಕರ್ನಾಟಕದ ಚುನಾವಣಾ ಮತದಾನ ಪೂರ್ಣಗೊಳ್ಳುತ್ತಿದ್ದಂತೆಯೇ ಬಾಗಲಕೋಟೆ ಲೋಕಸಭಾ ಕ್ಷೇತ್ರದತ್ತ ಕಾಂಗ್ರೆಸ್‌, ಬಿಜೆಪಿ ರಾಷ್ಟ್ರೀಯ ನಾಯಕರು ಲಗ್ಗೆ ಹಾಕುತ್ತಿದ್ದಾರೆ. ಚುನಾವಣಾ ಕಾವು ಏರತೊಡಗಿದೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಪ್ರವಾಸ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ.

ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರು ಸಣ್ಣ ಪ್ರಮಾಣದಲ್ಲಿ ಬಹಿರಂಗ ಸಭೆ, ಗ್ರಾಮಗಳಿಗೆ, ಮನೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಚುಣಾವಣಾ ಪ್ರಚಾರ ಮಂದಗತಿಯಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿ ಪ್ರಚಾರದ ಭರಾಟೆ ಹೆಚ್ಚಲಿದ್ದು, ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸಂಚರಿಸಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಬರುವುದರಿಂದ ದೊಡ್ಡ ಪ್ರಮಾಣದ ಬಹಿರಂಗ ಸಭೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ಪಕ್ಷದ ನಾಯಕರು ಮಾಡುವ ಭಾಷಣ, ಎದುರಾಳಿಗಳ ನೀತಿಗಳ ಟೀಕೆ, ಬೃಹತ್‌ ಬಹಿರಂಗ ಸಮಾವೇಶದ ಅಬ್ಬರದಿಂದಾಗಿ ಕ್ಷೇತ್ರದಲ್ಲೊಂದು ಅಲೆ ಏಳಲಿದೆ ಎಂಬುದು ಅಭ್ಯರ್ಥಿಗಳ ವಿಶ್ವಾಸ. ಈಗಾಗಲೇ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

ಸ್ಥಳೀಯ ಪ್ರವಾಸ ಪಟ್ಟಿಯ ಜತೆಗೆ ಹೈಕಮಾಂಡ್‌ ನಾಯಕರು ಬಂದಾಗಲೂ ಸಮಯ ಹೊಂದಾಣಿಕೆ ಮಾಡಬೇಕಾಗಿದೆ. ಜತೆಗೆ ಕಾರ್ಯಕ್ರಮ ಆಯೋಜನೆಯ ವ್ಯವಸ್ಥೆಯನ್ನೂ ಮಾಡಬೇಕಾಗಿದೆ. ಸುಡು ಬಿಸಿಲಿನಲ್ಲಿ ಹಳ್ಳಿಗಳಿಂದ ಕಾರ್ಯಕರ್ತರು, ಅಭಿಮಾನಿಗಳನ್ನು ಕರೆ ತರುವ ಕೆಲಸವೂ ಆಗಬೇಕಾಗಿದೆ. ಒಟ್ಟಿನಲ್ಲಿ ಚುನಾವಣಾ ಕಣ ರಂಗೇರುತ್ತಿದೆ.

ಪ್ರಿಯಾಂಕಾ ಗಾಂಧಿ
ಸಿದ್ದರಾಮಯ್ಯ

ರಬಕವಿ–ಬನಹಟ್ಟಿಗೆ ಸಿಎಂ ಇಂದು ‘ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.27ರಂದು ಮಧ್ಯಾಹ್ನ 12ಕ್ಕೆ ರಬಕವಿ-ಬನಹಟ್ಟಿಗೆ ಬರಲಿದ್ದಾರೆ’ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ‘ಎಸ್.ಆರ್.ಎ. ಹೈಸ್ಕೂಲ್ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ. ಸಚಿವರು ಶಾಸಕರು ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಕೋರಿದ್ದಾರೆ.

29ಕ್ಕೆ ಬಾಗಲಕೋಟೆಗೆ ಮೋದಿ ಬಾಗಲಕೋಟೆ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಏ.29ಕ್ಕೆ ಮೋದಿ ಬಾಗಲಕೋಟೆಗೆ ಬರಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಾರ್ಕಿಂಗ್‌ ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮುಂತಾದ ಕಾರ್ಯಗಳಿಗಾಗಿ ಒಂದು ಸಾವಿರ ಪ್ರಬಂಧಕರು ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಲೆ ಎಬ್ಬಿಸಲಿದ್ದಾರೆ’ ಎಂದರು. ‘ಕೃಷ್ಣಾ ನದಿ ನೀರನ್ನು ಮೊದಲು ನಾವು ಬಳಕೆ ಮಾಡಿಕೊಳ್ಳೋಣ. ಹೆಚ್ಚಿಗೆ ಉಳಿದರೆ ಬೇರೆಯವರಿಗೆ ಕೊಡುವ ಬಗ್ಗೆ ಚಿಂತಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.