ಬಾಗಲಕೋಟೆ: ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕಾಂಗ್ರೆಸ್ನಲ್ಲಿ ಜಾತಿ ವಿಷಬೀಜ ಹೆಚ್ಚಿದೆ. ಅಧಿಕಾರಕ್ಕೆ ಜಾತಿಯೇ ಮುಖ್ಯವಾಗುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಕ್ಕಲಿಗರೆಲ್ಲ ಸೇರಿಕೊಂಡು ಎಸ್.ಎಂ.ಕೃಷ್ಣ ಅವರಂತಹ ವ್ಯಕ್ತಿಯ ಹೆಸರು ದುರುಪಯೋಗ ಪಡಿಸಿಕೊಂಡು ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆಗೆ ದಲಿತರು, ಹಿಂದುಳಿದವರು ನಾವೆಲ್ಲ ಒಟ್ಟಿಗೆ ಸೇರಿಕೊಳ್ಳುತ್ತೇವೆ ಎನ್ನುತ್ತಾರೆ. ಜಾತಿ ಮುಖಂಡರ ಓಲೈಕೆ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ನಡೆದಿರುವ ಜಾತಿ ರಾಜಕಾರಣ ಒಳ್ಳೆಯದಲ್ಲ. ಮಹಾತ್ಮಗಾಂಧಿ ಬದುಕಿದ್ದು, ಇದನ್ನು ನೋಡಿದರೆ ನೇಣು ಹಾಕಿಕೊಳ್ಳುತ್ತಿದ್ದರೇನೋ? ಎಂದರು.
ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳ ಕಡೆ ಹಣ ಇಸಿದುಕೊಂಡು, ಮದ್ಯ ಕುಡಿದು, ಜಾತಿ ನೋಡಿ ಮತ ಹಾಕುವ ಮತದಾರರು ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಎಲ್ಲಿದೆ? ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು.
ವೀರಣ್ಣ ಹಳೇಗೌಡರ, ಬಸವರಾಜ್ ನಿಡಗುಂದಿ, ಬಸವರಾಜ್ ಬಾಗೇವಾಡಿ, ಅಂಬರೀಶ್ ಕೊಳ್ಳಿ, ರಾಜು ಚಿತ್ತವಾಡಗಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.