
ಬಾಗಲಕೋಟೆ: ನಗರದ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ನಡೆದಿದ್ದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲು ಪೊಲೀಸರು ಬೆನ್ನತ್ತಿದಾಗ, ಬಿದ್ದು ಆ ವ್ಯಕ್ತಿಯ ಕೈ ಮುರಿದಿದೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಅಶೋಕ ಬಾರಕೇರ ಕೈಮುರಿದುಕೊಂಡಿರುವ ವ್ಯಕ್ತಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈಗೆ ಬ್ಯಾಂಡೇಜ್ ಹಾಕಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
‘ನವನಗರದಲ್ಲಿರುವ ಹಿಂದೂ ಸಮಾವೇಶಕ್ಕೆ ಅಂಬೇಡ್ಕರ್ ಸರ್ಕಲ್ನಲ್ಲಿ ಹೋಗುತ್ತಿದ್ದಾಗ ನಾಲ್ಕೈದು ಮಂದಿ ಪೊಲೀಸರು ಲಾಠಿ ತೆಗೆದುಕೊಂಡು ಏಕಾಏಕಿ ಬೆನ್ನು ಹತ್ತಿದರು. ಗಾಬರಿಗೊಂಡು ಓಡಿ ಹೋಗುವಾಗ ಬಿದ್ದು ಕೈ ಮುರಿದಿದೆ. ತಲೆ ಹಾಗೂ ಕಾಲಿಗೆ ಸ್ವಲ್ಪ ಗಾಯವಾಗಿದೆ. ಯಾಕೆ ಬೆನ್ನು ಹತ್ತಿದ್ದರು ಎಂದು ಗೊತ್ತಿಲ್ಲ’ ಎಂದು ಅಶೋಕ ಬಾರಕೇರ ಸುದ್ದಿಗಾರರಿಗೆ ತಿಳಿಸಿದರು.
‘ಬಿದ್ದ ನಂತರ ಪೊಲೀಸರು ನನ್ನನ್ನು ಶಹರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನನ್ನ ಸಹೋದರ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದರು.
ತುಪ್ಪ ಸುರಿಯುವ ಕೆಲಸ: ‘ಮಧ್ಯಾಹ್ನದಿಂದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಹಿಂದೂ ಹುಡುಗರನ್ನು ಬಂಧಿಸುತ್ತಿದ್ದಾರೆ. ರಾಜಾಭಕ್ಷ ಎಂಬ ಪೊಲೀಸ್ ಬೆನ್ನು ಹತ್ತಿದ್ದರಿಂದ ಬಿದ್ದು ಯುವಕ ಗಾಯಗೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳು ಸಮಾಧಾನ ಮಾಡುವುದು ಬಿಟ್ಟು ಬೆಂಕಿಯೊಳಗೆ ತುಪ್ಪ ಸುರಿಯುವ ಕೆಲಸ ಮಾಡಿದರೆ ಮೈಮೇಲೆ ಹಾಕಿಕೊಳ್ಳುವುದಾಗುತ್ತದೆ. ತಕ್ಷಣ ಯಾರನ್ನೂ ಬಂಧಿಸಬಾರದು’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದರು.
‘ಯಾರನ್ನೂ ಬಂಧಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಈ ರೀತಿ ಮಾಡಿದರೆ ಬೆಳೆಯುತ್ತಾ ಹೋಗುತ್ತದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.
ಪುನೀತ್ ಕೆರೆಹಳ್ಳಿಗೆ ತಿಂಗಳ ಕಾಲ ನಿರ್ಬಂಧ
ಬಾಗಲಕೋಟೆ: ಕಲ್ಲು ತೂರಾಟ ಘಟನೆ ಹಿನ್ನೆಲೆಯಲ್ಲಿ ಬಾಗಲಕೋಟೆಗೆ ಬರುವುದಾಗಿ ಘೋಷಿಸಿದ್ದ ರಾಷ್ಟ್ರೀಯ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಅವರ ಜಿಲ್ಲೆಗೆ ಬರುವುದನ್ನು ಒಂದು ತಿಂಗಳ ಕಾಲ ನಿಷೇಧಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ಅವರು ‘ಸಭೆ ಮಾಡುವ ದೇಶದ ಎಲ್ಲೆಡೆ ಸಂಚರಿಸುವ ಹಕ್ಕು ನನಗಿದೆ. ಸಂವಿಧಾನದ ಹಕ್ಕನ್ನು ಹಿಂದೂ ಕಾರ್ಯಕರ್ತರ ಹಕ್ಕಗಳನ್ನು ಈ ಸರ್ಕಾರ ಕಿತ್ತುಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.