ADVERTISEMENT

ಸೋತವರಿಂದಲೇ ಪಕ್ಷಕ್ಕೆ ಮುಖಭಂಗ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 11:01 IST
Last Updated 27 ಅಕ್ಟೋಬರ್ 2019, 11:01 IST
   

ರಬಕವಿ ಬನಹಟ್ಟಿ(ಬಾಗಲಕೋಟೆ ಜಿಲ್ಲೆ): ‘ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ನಡೆಸಲು ಪಕ್ಷದಿಂದ ನನಗೆ ಯಾವುದೇ ರೀತಿಯ ಆದೇಶವಾಗಲಿ, ಸಂದೇಶವಾಗಲಿ ಬಂದಿರಲಿಲ್ಲ. ಬದಲಾಗಿ ಸೋತ ಹಾಗೂ ಏನು ಅರಿಯದ ವ್ಯಕ್ತಿಗಳನ್ನು ಪ್ರಚಾರದ ಮುಂಚೂಣಿಗೆ ತಂದಿದ್ದರಿಂದ ಪಕ್ಷಕ್ಕೆ ಮುಖಭಂಗವಾಗಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಶನಿವಾರ ಇಲ್ಲಿ ಪರೋಕ್ಷವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದರು.

ಬನಹಟ್ಟಿಯಲ್ಲಿ ಶನಿವಾರ ಸಿದ್ಧಸಿರಿ ಸೌಹಾರ್ದ ಸಂಘದ 115 ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಲಿಂಗಾಯತರು ಬಿ.ಎಸ್‌.ಯಡಿಯೂರಪ್ಪ ಅವರನ್ನು ನಂಬಿದಂತೆ ಮಹಾರಾಷ್ಟ್ರದಲ್ಲಿ ಮರಾಠ ಹಾಗೂ ಹರಿಯಾಣದಲ್ಲಿ ಜಾಟ್ ಸಮುದಾಯದವರು ಸ್ಥಳೀಯ ನಾಯಕತ್ವದ ಮೇಲೆ ನಂಬಿ ಇಟ್ಟಿವೆ. ಆದರೆ, ಅವರನ್ನು ಓಲೈಸುವಲ್ಲಿ ನಾವು ಸ್ವಲ್ಪ ಹಿಂದುಳಿದೆವು ಕಂಡು ಬಂದಿದೆ. ಯಾವಾಗಲೂ ವಿಧಾನಸಭೆ ಚುನಾವಣೆಗಳ ಫಲಿತಾಂಶ ಸ್ಥಳೀಯ ನಾಯಕತ್ವವನ್ನೇ ಅವಲಂಬಿಸಿವೆ ಎಂಬುದಕ್ಕೆ ಆ ಎರಡು ರಾಜ್ಯಗಳ ಮತದಾರರು ನೀಡಿರುವ ಸಂದೇಶವೇ ಸಾಕ್ಷಿ‘ ಎಂದರು.

ADVERTISEMENT

ಸಂತ್ರಸ್ತರು ಭಿಕ್ಷುಕರಲ್ಲ: ಪ್ರವಾಹದಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿರುವ ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಜನರು ಭಿಕ್ಷುಕರಲ್ಲ. ಇವರೆಲ್ಲರೂ ಸ್ಥಿತಿವಂತರಿದ್ದಾರೆ. ಪ್ರವಾಹಕ್ಕೆ ತುತ್ತಾಗಿ ಆರ್ಥಿಕ ತೊಂದರೆ ಅನುಭವಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಕೇಂದ್ರದ ಸಚಿವರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.