
ಇಳಕಲ್ (ಬಾಗಲಕೋಟೆ): ತಾಲ್ಲೂಕಿನ ಸಂಕ್ಲಾಪೂರ ಗ್ರಾಮ ವ್ಯಾಪ್ತಿಯ ಇಟ್ಟಂಗಿ ಭಟ್ಟಿಯಲ್ಲಿ ಜೀತಕ್ಕಿದ್ದ ಒಡಿಶಾ ಮೂಲದ ಐವರು ಬಾಲಕಾರ್ಮಿಕರು ಸೇರಿ 25 ಕಾರ್ಮಿಕರನ್ನು ಜೀತಮುಕ್ತಗೊಳಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಪೋಲಿಸರು ಭಟ್ಟಿ ಮೇಲೆ ದಾಳಿ ಮಾಡಿದರು. 25 ಕಾರ್ಮಿಕರು ಹಾಗೂ ಅಲ್ಲಿಯೇ ಇದ್ದ 9 ಮಕ್ಕಳನ್ನು ಬಂಧಮುಕ್ತ ಮಾಡಿ, ರಕ್ಷಿಸಿದ್ದಾರೆ.
ಇಟ್ಟಂಗಿ ಭಟ್ಟಿ ಮಾಲೀಕ ಈರಪ್ಪ ವೀರಭದ್ರಪ್ಪ ಕುಂಬಾರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜೀತಪದ್ದತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಅಧಿಕಾರಿ ನಾಸಿರ್ ಹುಸೇನ ಬೋರಗಿ ದೂರು ನೀಡಿದ್ದಾರೆ.
‘ಒಡಿಶಾದಿಂದ ಕರೆ ತರಲಾಗಿದ್ದ ಕಾರ್ಮಿಕರಿಗೆ ₹ 10 ಲಕ್ಷ ಮುಂಗಡ ನೀಡಿ, ವಾರಕ್ಕೆ ಒಬ್ಬರಿಗೆ ₹ 400 ನೀಡಲಾಗುತ್ತಿತ್ತು. ಶೌಚಾಲಯ, ವೈದ್ಯಕೀಯ ಉಪಚಾರ ಹಾಗೂ ಊಟ ನೀಡದೇ, ನಿಗದಿತ ಅವಧಿಗಿಂತ ಹೆಚ್ಚಿಗೆ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಕಾರ್ಮಿಕರನ್ನು ಬಾಗಲಕೋಟೆಗೆ ಕರೆದೊಯ್ದು, ಅಲ್ಲಿಂದ ಒಡಿಶಾದ ಅವರ ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಗಳದ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.