
ಪೊಲೀಸ್
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಇಲ್ಲಿನ ನವನಗರದ ದಿವ್ಯಜ್ಯೋತಿ ಅಂಧಮಕ್ಕಳ ಶಾಲೆಯಲ್ಲಿ ಅಲ್ಲಿನ ಸಿಬ್ಬಂದಿ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿವೆ. ಶಾಲೆಯಲ್ಲಿದ್ದ ಬುದ್ಧಿಮಾಂದ್ಯ ಬಾಲಕ ದೀಪಕ್ ರಾಠೋಡ (16) ಮೇಲೆ ಸಂಸ್ಥೆಯ ಅಧ್ಯಕ್ಷ ಅಕ್ಷಯ ಇಂದೊಲ್ಕರ್ ಎಂಬುವರು ಥಳಿಸುವ, ಅವರ ಪತ್ನಿ ಬಾಲಕನೊಬ್ಬನ ಕಣ್ಣಿಗೆ ಖಾರದ ಪುಡಿ ಎರೆಚಿರುವ ದೃಶ್ಯಗಳು ವಿಡಿಯೊದಲ್ಲಿವೆ.
‘ಬಾಲಕನ ಕೈ, ಕಾಲುಗಳ ಮೇಲೆ ಬಾಸುಂಡೆ ಮೂಡಿವೆ. ಬಾಲಕ ಅರಚಾಡುತ್ತಿದ್ದರೂ ಹಲ್ಲೆ ನಡೆದಿದೆ. ಕೆಲ ಶಿಕ್ಷಕರು ಅಲ್ಲಿದ್ದರೂ ಬಿಡಿಸಲು ಹೋಗದೇ, ನೋಡುತ್ತ ನಿಂತಿದ್ದಾರೆ. ಮುಖ್ಯಸ್ಥ ಅಕ್ಷಯ ಮತ್ತು ಅವರ ಪತ್ನಿ ಜೊತೆಗೆ ಶಾಲೆಯ ಇನ್ನಿಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಹಲ್ಲೆಗೆ ಸಂಬಂಧಿಸಿದಂತೆ ಬಾಲಕನ ತಂದೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ಗಾರೆ.
ಅಧಿಕಾರಿಗಳ ಭೇಟಿ:
ವಿಡಿಯೊ ಹರಿದಾಡುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್, ಜಿಲ್ಲಾ ವಿಕಲಚೇತನರ ಇಲಾಖೆ ಅಧಿಕಾರಿ ಗಿರಿಜಾ ಪಾಟೀಲ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಸೇರಿ ವಿವಿಧ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು.
‘ದಾಖಲೆಗಳನ್ನು ಪರಿಶೀಲಿಸಿದಾಗ ಶಾಲೆಯು ಸರ್ಕಾರ, ಇಲಾಖೆಯಿಂದ ಯಾವುದೇ ಪರವಾನಗಿ ತೆಗೆದುಕೊಳ್ಳದಿರುವುದು ಗಮನಕ್ಕೆ ಬಂದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಶಾಲೆಯಲ್ಲಿ 49 ಮಕ್ಕಳು ಇದ್ದು, ಅವರೆಲ್ಲ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದಿದ್ದಾರೆ. ಸಂಸ್ಥೆಯನ್ನು ಬಂದ್ ಮಾಡಿಸಿ, ಅಲ್ಲಿರುವ ಮಕ್ಕಳನ್ನು ಅವರ ಪಾಲಕರಿಗೆ ಒಪ್ಪಿಸುವ ಕೆಲಸ ಮಾಡಲಾ ಗುವುದು. ಇಲಾಖೆಯ ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ಮಾಡಲಾಗುವುದು. ಘಟನೆ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಲಾಗುವುದು’ ಎಂದು ಪ್ರಭಾಕರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.