ರಾಂಪುರ: ‘ಸಹಕಾರ ಸಂಘಗಳ ಬೆಳವಣಿಗೆಗೆ ಗ್ರಾಹಕರು, ಠೇವಣಿದಾರರ ಸಹಕಾರ ಅಗತ್ಯವಾಗಿದೆ’ ಎಂದು ನಿವೃತ್ತ ಶಿಕ್ಷಕ ಕೆ.ಪಿ.ಅರಿಷಿನಗೋಡಿ ಹೇಳಿದರು.
ಸಮೀಪದ ಬೆನಕಟ್ಟಿಯಲ್ಲಿ ಶನಿವಾರ ಜರುಗಿದ ವಿಶ್ವಭಾರತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 15ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಹಾಯ ಒದಗಿಸುವಲ್ಲಿ ಸಹಕಾರ ಸಂಘಗಳು ಮಹತ್ತರ ಪಾತ್ರ ನಿರ್ವಹಿಸುತ್ತವೆ’ ಎಂದರು.
ಸಂಘದ ವ್ಯವಸ್ಥಾಪಕ ಟಿ.ಎಚ್.ಸನ್ನಪ್ಪನವರ ಸಂಘದ ವಾರ್ಷಿಕ ವರದಿ ಮಂಡಿಸಿ, ಸಂಘ ಕಳೆದ ಮಾರ್ಚ್ ಅಂತ್ಯಕ್ಕೆ ₹4.86 ಲಕ್ಷ ಲಾಭ ಗಳಿಸಿದ್ದು, ಗ್ರಾಹಕರಿಗೆ ಪ್ರತಿಶತ 5 ರಷ್ಟು ಲಾಭಾಂಶ ನೀಡಲು ನಿರ್ಧರಿಸಿದೆ’ ಎಂದು ಹೇಳಿದರು.
ಗ್ರಾಹಕರ ಪರವಾಗಿ ಶಿವಾನಂದ ಅಂಗಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗದಿಗೆಪ್ಪ ಅರಕೇರಿ ಮಾತನಾಡಿ, ‘ಪರಸ್ಪರ ಸಹಕಾರದೊಂದಿಗೆ ನಡೆದಾಗ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯ’ ಎಂದರು.
ಮಾಲತೇಶ ಅಮಾತೆಪ್ಪನವರ ಸಭೆ ಉದ್ಘಾಟಿಸಿದರು. ಪಿಕೆಪಿಎಸ್ ಅಧ್ಯಕ್ಷ ವೇಮನ ಯಡಹಳ್ಳಿ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಂಡಿತ ಮಾಚಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸನ್ನಪ್ಪನವರ, ಆರ್.ಟಿ.ಅರಿಷಿನಗೋಡಿ, ನಿರ್ದೇಶಕರಾದ ಹಣಮಂತ ತೆಗ್ಗಿ, ತಿಪ್ಪಣ್ಣ ಗುಳೇದ, ಕೃಷ್ಣಾ ಪಾಟೀಲ, ನಿಂಗಣ್ಣ ಸಣ್ಣಪ್ಪನವರ, ಹಣಮಂತ ವಾಲೀಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.