ಬಾಗಲಕೋಟೆ:ಸಾರ್ವಜನಿಕ ಗ್ರಂಥಾಲಯ ಪರಿಚಯಿಸಿರುವ (e- sarvajanika Granthalaya) ಇ–ಸಾರ್ವಜನಿಕ ಗ್ರಂಥಾಲಯ ಆ್ಯಪ್ಗೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ 11 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ.
2020ರಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಓದುಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆ್ಯಪ್ ಪರಿಚಯಿಸಲಾಗಿತ್ತು. ಆನ್ಲೈನ್ ಓದುಗರು, ಯುವಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ವರದಾನವಾಗಿತ್ತು. ಈಗಲೂ ಜನರು ಅಲ್ಲಿ ಓದುತ್ತಿದ್ದಾರೆ.
ಮೊಬೈಲ್ನಲ್ಲಿ ಆ್ಯಪ್ನ ಮೂಲಕ ಅಷ್ಟೇ ಅಲ್ಲದೆ, ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ, ಇಳಕಲ್, ಹುನಗುಂದ ಸೇರಿದಂತೆ ಜಿಲ್ಲೆಯ 11 ಗ್ರಂಥಾಲಯಗಳಲ್ಲಿ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಆನ್ಲೈನ್ನ ಮೂಲಕ ಓದಲು ಅವಕಾಶ ಕಲ್ಪಿಸಲಾಗಿದೆ. ಆ್ಯಪ್ ಡೌನ್ಲೋಡ್ ಹಾಗೂ ಬಳಕೆ ಉಚಿತವಾಗಿರುವುದರಿಂದ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕತೆ, ಕವಿತೆ, ಕಾದಂಬರಿ ಸೇರಿದಂತೆ ಕೆ.ಎ.ಎಸ್, ಐ.ಎ.ಎಸ್, ಪಿ.ಎಸ್ಐ, ಪಿಡಿಒ ಸೇರಿದಂತೆ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪಠ್ಯ ಅಲ್ಲಿ ಲಭ್ಯ ಇವೆ. ಓದುಗುರ ಅನುಕೂಲಕ್ಕಾಗಿ ಕೆಲವು ಪಾಠಗಳ ವಿಡಿಯೊಗಳನ್ನು ಹಾಕಲಾಗಿದೆ. ವಿಡಿಯೊ ನೋಡುವ ಮೂಲಕ ಸುಲಭವಾಗಿ ವಿಷಯ ಅರ್ಥ ಮಾಡಿಕೊಳ್ಳಬಹುದಾಗಿದೆ.
ನೋಂದಣಿ ಕರ್ನಾಟಕ ಪಬ್ಲಿಕ್ ಡಿಜಿಟಲ್ ಲೈಬ್ರರಿ (ಕೆಡಿಪಿಎಲ್) ಎಂದು ಗೂಗಲ್ನಲ್ಲಿ ಟೈಪ್ ಮಾಡಿ ಎಂಟ್ರಿ ಒತ್ತಿದರೆ, ವೆಬ್ಸೈಟ್ ತೆಗೆದುಕೊಳ್ಳುತ್ತದೆ. ಅಲ್ಲಿಯೇ ನೋಂದಣಿ ಲಿಂಕ್ ದೊರೆಯುತ್ತದೆ. ಅಲ್ಲಿ ಕೇಳಿದ ವಿವರಗಳನ್ನು ತುಂಬಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಓದುಗರ ಸಂಖ್ಯೆ ಇಳಿಕೆ ಆಗಿಲ್ಲ: ಆ್ಯಪ್ ಪರಿಚಯಿಸಿದ ನಂತರವೂ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವವರ ಸಂಖ್ಯೆಯಲ್ಲಿ ಇಳಿಕೆ ಆಗಿಲ್ಲ. ನಿತ್ಯ ನೂರಾರು ಜನ ಓದುಗರು ಬರುತ್ತಾರೆ. ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.