ADVERTISEMENT

ಗುಳೇದಗುಡ್ಡ: ₹5 ಕೋಟಿ ನೀರಾವರಿ ಯೋಜನೆ ನಿಸ್ಪ್ರಯೋಜಕ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 8:06 IST
Last Updated 21 ಡಿಸೆಂಬರ್ 2023, 8:06 IST
ಗುಳೇದಗುಡ್ಡ ಸಮೀಪದ ಬೂದಿನಗಡ ಗ್ರಾಮದ ಹತ್ತಿರ ನಿರ್ಮಿಸಿದ ಕಾಲುವೆಗೆ ಇದುವರೆಗೂ ನೀರು ಹರಿಸಿಲ್ಲ
ಗುಳೇದಗುಡ್ಡ ಸಮೀಪದ ಬೂದಿನಗಡ ಗ್ರಾಮದ ಹತ್ತಿರ ನಿರ್ಮಿಸಿದ ಕಾಲುವೆಗೆ ಇದುವರೆಗೂ ನೀರು ಹರಿಸಿಲ್ಲ   

ಗುಳೇದಗುಡ್ಡ: ತಾಲ್ಲೂಕಿನ ಇಂಜಿನವಾರಿ ಏತ ನೀರಾವರಿ ಯೋಜನೆಯು ಕೃಷಿ ಭೂಮಿಗೆ ನೀರಾವರಿ ಒದಗಿಸುವ ಬಹು ಮಹತ್ವವಾದ ಯೋಜನೆಯಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಕೋಟ್ಯಂತರ ಖರ್ಚುಮಾಡಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಪೂರ್ಣಗೊಳಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ.

ಇಂಜಿನಿವಾರಿ ಗ್ರಾಮ ಹಳದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಲಪ್ರಭಾ ನದಿಯ ದಡದಲ್ಲಿರುವ ಗ್ರಾಮವು ಸಣ್ಣ ನೀರಾವರಿ ಇಲಾಖೆಯ ಆರ್‌ಐಡಿಎಫ್ 14ನೇ ಹಣಕಾಸು ಯೋಜನೆಯಡಿಯಲ್ಲಿ 2010 ರಲ್ಲಿ ₹4.99 ಕೋಟಿ ವೆಚ್ಚದಲ್ಲಿ 1225 ಎಕರೆ ಭೂಮಿಗೆ ನೀರು ಒದಗಿಸಲು ಸಿದ್ದಪಡಿಸಿದೆ. ಇಂಜಿನವಾರಿ ಏತ ನೀರಾವರಿ ಯೋಜನೆಯಿಂದ ರೈತರ ಕೃಷಿ ಭೂಮಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ಈ ಭಾಗದ ರೈತರ ಕನಸು ನನಸಾಗದೇ ಕನಸಾಗದೆ ಉಳಿದಿದೆ.

ಯೋಜನೆ ಅನಾನುಕೂಲ: ಒಂದು ವೇಳೆ ಕಾಲುವೆಗೆ ನೀರು ಹರಿಸಿದ್ದರೆ ಈ ಯೋಜನೆಯಿಂದ 1225 ಎಕರೆ ಕೃಷಿಭೂಮಿಗೆ ನೀರು ಒದಗಿಸಲಾಗುತ್ತಿತ್ತು. ವಾಸ್ತವದಲ್ಲಿ ಈ ಭಾಗದ ರೈತರ ಭೂಮಿಗಳು ನೀರಾವರಿಯಿಂದ ವಂಚಿತವಾಗಿವೆ. ರೈತರು ನೀರಿಲ್ಲದೆ, ಸರ್ಕಾರ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಕುಸಿದ ಕಾಲುವೆಗಳು: ಮಲಪ್ರಭಾ ನದಿಯ ದಂಡೆಯ ಮೇಲೆ ಇಂಜನವಾರಿ ಗ್ರಾಮದ ಹತ್ತಿರ ನಿರ್ಮಿಸಿದ ಪಂಪ್‍ಹೌಸ್ ನಿರ್ವಹಣೆಯಿಲ್ಲದೆ ಬಂದ್ ಆಗಿದೆ. ಅದಕ್ಕೆ ಬೀಗ ಜಡಿದು ಹಲವು ವರ್ಷಗಳೇ ಕಳೆದಿವೆ. ಅಧಿಕಾರಿಗಳು ಈ ಯೋಜನೆ ಪೂರ್ಣಗೊಳಿಸಿದರೂ ಇಂಜಿನವಾರಿ ಹಾಗೂ ಬೂದಿನಗಡ ವ್ಯಾಪ್ತಿಯ ಕೃಷಿಭೂಮಿ ನೀರಾವರಿಯಾಗುತ್ತಿಲ್ಲ. ಕಾಲುವೆ ಅಲ್ಲಲ್ಲಿ ಕುಸಿದು ಬೀಳುವ ಹಂತದಲ್ಲಿದೆ. ಕಾಲುವೆಯಲ್ಲಿ ಮುಳ್ಳುಕಂಠಿಗಳು ಬೆಳೆದು ನಿಂತಿವೆ. ಭೂಮಿಗೆ ನೀರು ಒದಗಿಸುವುದು ಮರೀಚಿಕೆಯಾಗಿದೆ.

ADVERTISEMENT

ಕಳ್ಳರ ಪಾಲು: ವಿದ್ಯುತ್ ಸರಬರಾಜು ಕೊಠಡಿ ಬೀಗ ಮುರಿದು ಸಣ್ಣ ಟಿಸಿ ಹಾಗೂ ಅಲ್ಲಿರುವ ಆಯಿಲ್‌ನ್ನು ಕಳವು ಮಾಡಲಾಗಿದೆ. ಅಲ್ಲಿ ವಿದ್ಯುತ್ ಸರಬರಾಜಿಗೆ ತೊಂದರೆಯಾಗಿದೆ.

ರೈತರ ಅನುಕೂಲಕ್ಕೆ ಸರ್ಕಾರ ಏತ ನೀರಾವರಿ ಯೋಜನೆ ಮಾಡಿದೆ. ಆದರೆ ಅಧಿಕಾರಿಗಳು ರೈತರಿಗೆ ಅನುಕೂಲವಾಗಲು ಕೆಲಸ ಮಾಡಬೇಕು
ತಿಪ್ಪಣ್ಣ ಗೌಡರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಇಂಜಿನವಾರಿ
ವಿದ್ಯುತ್‍ಗೆ ಸಂಬಂಧಿಸಿದ ಸಾಮಗ್ರಿ ಮತ್ತು ಆಯಿಲ್ ಕಳ್ಳತನವಾಗಿದೆ. ವಿಜಯಪುರ ವಿಭಾಗದ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದ್ದು ಅವರ ಸೂಚನೆಯಂತೆ ಮುಂದುವರಿಯಲಾಗುವುದು
ಪ್ರಕಾಶ ನಾಯಕ್.ಎಇಇಸಣ್ಣ ನೀರಾವರಿ ಇಲಾಖೆ ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.