ADVERTISEMENT

ಕಳ್ಳಬಟ್ಟಿ ಕೊಳೆ ತುಂಬಿದ್ದ ಬಿಂದಿಗೆಗಳ ಕೆರೆಯ ನೀರಿನಡಿ ಬಚ್ಚಿಟ್ಟಿದ್ದರು!

ಬಾಗಲಕೋಟೆ: ದಂಧೆಕೋರರ ತಂತ್ರ; ಅಧಿಕಾರಿಗಳಿಗೇ ಅಚ್ಚರಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 16:14 IST
Last Updated 26 ಫೆಬ್ರುವರಿ 2021, 16:14 IST
ಅಮೀನಗಡ ತಾಂಡಾ ಬಳಿಯ ಕೆರೆಯಲ್ಲಿ ವಶಪಡಿಸಿಕೊಂಡ ಬೆಲ್ಲದ ಕೊಳೆ ತುಂಬಿದ ಬಿಂದಿಗೆಗಳೊಂದಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ
ಅಮೀನಗಡ ತಾಂಡಾ ಬಳಿಯ ಕೆರೆಯಲ್ಲಿ ವಶಪಡಿಸಿಕೊಂಡ ಬೆಲ್ಲದ ಕೊಳೆ ತುಂಬಿದ ಬಿಂದಿಗೆಗಳೊಂದಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ   

ಬಾಗಲಕೋಟೆ: ಅಬಕಾರಿ ಇಲಾಖೆಯ ಕಣ್ತಪ್ಪಿಸಲು ಹುನಗುಂದ ತಾಲ್ಲೂಕಿನ ಅಮೀನಗಡ ತಾಂಡಾದ ಕಳ್ಳಬಟ್ಟಿ ಸಾರಾಯಿ ತಯಾರಕರು ಕಂಡುಕೊಂಡ ಮಾರ್ಗ ಸ್ವತಃ ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಅಚ್ಚರಿಗೀಡು ಮಾಡಿದೆ.

ದಂಧೆಕೋರರು ಈ ಮೊದಲು ಕಳ್ಳಬಟ್ಟಿ ಕಾಯಿಸಲು ತಾಂಡಾದ ಸುತ್ತಲಿನ ಅರಣ್ಯಪ್ರದೇಶ, ಗುಡ್ಡಗಾಡಿನ ನಿರ್ಜನ ‍ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ 10 ತಿಂಗಳಿನಿಂದ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿರುವ ನಿರಂತರ ದಾಳಿಯಿಂದ ಕಂಗೆಟ್ಟ ಅವರು ಈ ಬಾರಿ ಕಳ್ಳಬಟ್ಟಿ ಕೊಳೆ ಅಡಗಿಸಿ ಇಡಲು ವಿಭಿನ್ನ ಮಾರ್ಗ ಕಂಡುಕೊಂಡು ಅದಕ್ಕೆ ಅಮೀನಗಡ ಕೆರೆಯನ್ನೇ ಬಳಸಿಕೊಂಡಿದ್ದಾರೆ.

ಕೊಳೆಯಲು ಹಾಕಿದ ರಸಾಯನವನ್ನು ಪ್ಲಾಸ್ಟಿಕ್‌ ಕೊಡಗಳಲ್ಲಿ (ಬಿಂದಿಗೆ) ತುಂಬಿ ಅವುಗಳ ಬಾಯಿ ಬಿಗಿಯಾಗಿ ಮುಚ್ಚಿ ಅಮೀನಗಡ ತಾಂಡಾದ ಕೆರೆಯ ನೀರು ತುಂಬಿದ ಅಂಗಳದೊಳಗೆ ಗುಂಡಿ ತೋಡಿ ಅಲ್ಲಿ ಅಡಗಿಸಿ ಇಟ್ಟಿದ್ದಾರೆ. ಅದೇ ಜಾಗದಲ್ಲಿ ಕೊಡಗಳ ಇಟ್ಟಿರುವ ಗುರುತಿಗೆ ಅವುಗಳ ಮುಚ್ಚಳದ ಬಳಿ ದೊಡ್ಡ ಗಾತ್ರದ ಕಲ್ಲುಗಳ ಕಟ್ಟಿದ್ದಾರೆ.

ADVERTISEMENT

ಆ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೀನುಗಾರಿಕೆ ಇಲಾಖೆ ಸಿಬ್ಬಂದಿಯೊಂದಿಗೆ ಶುಕ್ರವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಬೆಲ್ಲದ ಕೊಳೆಯ ರಸಾಯನ ತುಂಬಿದ್ದ 40 ಬಿಂದಿಗೆಗಳನ್ನು ವಶಪಡಿಸಿಕೊಂಡರು.

ಮೀನುಗಾರಿಕೆ ಇಲಾಖೆ ಸಿಬ್ಬಂದಿ ಕೆರೆಯ ನೀರಿನಲ್ಲಿ ಮುಳುಗಿ ಬಣ್ಣ ಬಣ್ಣದ ಕೊಡಗಳಲ್ಲಿ ತುಂಬಿ ಇಟ್ಟಿದ್ದ ರಸಾಯನವನ್ನು ಹೊರಗೆ ತಂದರು.

’ನನ್ನ 10 ವರ್ಷಗಳ ಸೇವಾವಧಿಯಲ್ಲಿ ಇದೇ ಮೊದಲ ಬಾರಿಗೆ ಕಳ್ಳಬಟ್ಟಿ ತಯಾರಿಕೆಗೆ ದಂಧೆಕೋರರು ಇಂತಹ ತಂತ್ರ ಬಳಸಿದ್ದು ಗಮನಿಸಿದೆನು. ಕೊಡಗಳನ್ನು ಬಚ್ಚಿಟ್ಟಿದ್ದ ಕಡೆ ನೀರೊಳಗಿಂದ ಸಣ್ಣದಾಗಿ ಗುಳ್ಳೆಗಳು ಮೇಲೇಳುತ್ತಿದ್ದವು. ಅವು ಕೂಡ ಬೆಲ್ಲದ ಕೊಳೆ ತುಂಬಿದ ಕೊಡಗಳ ಪತ್ತೆ ಮಾಡಲು ಸಾಧ್ಯವಾಯಿತು‘ ಎಂದು ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತ ರಮೇಶ ಕುಮಾರ್ ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.