ADVERTISEMENT

ಬಾಗಲಕೋಟೆ: ಉದ್ಯಮಶೀಲತೆಯೇ ಮಹಿಳಾ ಸಬಲೀಕರಣ

ತೋಟಗಾರಿಕೆ ಮೇಳ: ವರ್ಚ್ಯುವಲ್ ಮೂಲಕ ರಾಜ್ಯಪಾಲರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 13:21 IST
Last Updated 25 ಡಿಸೆಂಬರ್ 2021, 13:21 IST
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಹಣ್ಣು–ಹಂಪಲನ್ನು ಸಚಿವ ಮುರುಗೇಶ ನಿರಾಣಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ವೀಕ್ಷಣೆ ಮಾಡಿದರು
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಹಣ್ಣು–ಹಂಪಲನ್ನು ಸಚಿವ ಮುರುಗೇಶ ನಿರಾಣಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ವೀಕ್ಷಣೆ ಮಾಡಿದರು   

ಬಾಗಲಕೋಟೆ: ಉದ್ಯಮಶೀಲತೆ ಮೂಲಕ ಮಹಿಳಾ ಸಬಲೀಕರಣಕ್ಕೆ ಅವಕಾಶವಿದೆ. ಸ್ವ– ಸಹಾಯ ಗುಂಪುಗಳು, ಸಹಕಾರಿ ಸಂಸ್ಥೆಗಳು ಮತ್ತು ರೈತ ಉತ್ಪಾದಕ ಕಂಪನಿಗಳ ಮೂಲಕ ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಒದಗಿಸಿದಲ್ಲಿ ಅವರ ಜೀವನಮಟ್ಟ ಸುಧಾರಿಸಲು ಸಾಧ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿಹಮ್ಮಿಕೊಂಡ ಮೂರು ದಿನಗಳ ತೋಟಗಾರಿಕೆ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ವೈವಿಧ್ಯಮಯ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳೊಂದಿಗೆ ತೋಟಗಾರಿಕೆ ಉತ್ಪಾದನೆ ಹೆಚ್ಚಿಸಲು ಕರ್ನಾಟಕಕ್ಕೆ ದೇಶದಲ್ಲಿಯೇ ಹೆಚ್ಚು ಅವಕಾಶವಿದೆ. ಈ ಹಾದಿಯಲ್ಲಿ ಮಹಿಳೆಯರನ್ನು ಸಹಭಾಗಿಗಳಾಗಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಈ ವರ್ಷದ ತೋಟಗಾರಿಕೆ ಮೇಳವನ್ನು ‘ಮಹಿಳಾ ಸಬಲೀಕರಣಕ್ಕಾಗಿ ತೋಟಗಾರಿಕೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಕರ್ನಾಟಕದ ಕೃಷಿ ಕ್ಷೇತ್ರ ಶೇ18ರಷ್ಟು ತೋಟಗಾರಿಕೆ ಬೆಳೆಗಳಿಂದ ಕೂಡಿದೆ. ರಾಜ್ಯದ ಒಟ್ಟು ಕೃಷಿ ಜಿಡಿಪಿಯಲ್ಲಿ ತೋಟಗಾರಿಕೆ ಶೇ30ರಷ್ಟು ಕೊಡುಗೆ ನೀಡಿದೆ. 2018ರಲ್ಲಿ ಒಟ್ಟು 183.46 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ತೋಟಗಾರಿಕೆ ಬೆಳೆ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಹಣ್ಣು ಮತ್ತು ಸಾಂಬಾರು ಕೃಷಿಯಲ್ಲಿ ಐದನೇ ಸ್ಥಾನ, ವಾಣಿಜ್ಯ ಹೂ ಬೆಳೆಯುವಲ್ಲಿ ಆರನೇ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಅಗತ್ಯ. ರೈತರ ಮತ್ತು ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಸೂಕ್ತ ಬೆಳೆ ಪ್ರಭೇದ ಪರಿಚಯಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಕನಸು ನನಸಾಗಿಸಲು ಪ್ರತಿ ಹನಿ ನೀರಿಗೆ ಹೆಚ್ಚು ಬೆಳೆ ತರಿಸಲು ಮಣ್ಣು, ನೀರಿನ ಸಂರಕ್ಷಣೆ, ಕೃಷಿ ಯಾಂತ್ರೀಕರಣ, ಸುಗ್ಗಿಯ ನಂತರದ ಫಸಲಿನ ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳಿಗೆ ಸಂಬಂಧಿಸಿದ ಸೂಕ್ತ ತಂತ್ರಜ್ಞಾನ ಅಭಿವೃದ್ದಿಪಡಿಸಲು ವಿಶ್ವವಿದ್ಯಾಲಯಕ್ಕೆ ಸೂಚಿಸುವುದಾಗಿ ಹೇಳಿದರು.

ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ವಿಶ್ವವಿದ್ಯಾಲಯದ ಸಂಶೋಧನೆಗಳು ಕಟ್ಟಕಡೆಯ ರೈತನಿಗೆ ತಲುಪಬೇಕಿದೆ. ರೈತರಿಗೆ ಗುಣಮಟ್ಟದ ಬೀಜ, ಸಸಿಗಳು ಸಿಗಬೇಕು. ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ದೊರೆಯಬೇಕು. ಹಣ್ಣು, ತರಕಾರಿ ಕ್ಷೇತ್ರ ಮತ್ತಷ್ಟು ಬಲಪಡಿಸಲು ಕ್ರಮಕೈಗೊಂಡಾಗ ಮಾತ್ರ ವಿಜ್ಞಾನಿಗಳ ಪ್ರಯತ್ನಕ್ಕೆ ಬೆಲೆ ಬರಲಿದೆ ಎಂದರು.

ಕೃಷಿ ಲಾಭದಾಯಕ ಮಾಡಲು, ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಯೋಜನೆಗಳು ಇದೀಗ ಸಾಕಾರಗೊಳ್ಳುತ್ತಿವೆ. ರೈತರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು ಕೇಂದ್ರ ಸರ್ಕಾರ ₹1 ಲಕ್ಷ ಕೋಟಿ ಹಣ ಕಾಯ್ದಿರಿಸಿದೆ. ಬರುವ ದಿನಗಳಲ್ಲಿ ಅದರ ಉಪಯೋಗ ನಿಶ್ಚಿತವಾಗಿಯು ರೈತರಿಗೆ ಆಗಲಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತೋಟಗಾರಿಕೆ ಕ್ಷೇತ್ರದ ಕೊಡುಗೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಇತ್ತೀಚಿನ ದಿನಮಾನಗಳಲ್ಲಿ ಜನರಲ್ಲಿ ಆರೋಗ್ಯ, ಪೌಷ್ಟಿಕತೆಯಗೆ ಸಂಬಂಧಿಸಿದಂತೆ ಅರಿವು ಮೂಡುತ್ತಿರುವುದರಿಂದ ಸಹಜವಾಗಿ ತೋಟಗಾರಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.