ADVERTISEMENT

ಬಾದಾಮಿ: ಪ್ರತಿಷ್ಠಾಪನೆಯಾಗದ ಪುಲಿಕೇಶಿ, ಬಸವೇಶ್ವರ ಮೂರ್ತಿ

ದುರಸ್ತಿ ಕಾಣದ ಕಮಾನು (ಬಾಗಿಲು), ದಿಕ್ಸೂಚಿ ಫಲಕಗಳು

ಎಸ್.ಎಂ ಹಿರೇಮಠ
Published 5 ಸೆಪ್ಟೆಂಬರ್ 2025, 4:19 IST
Last Updated 5 ಸೆಪ್ಟೆಂಬರ್ 2025, 4:19 IST
ಬಾದಾಮಿ ಹೊರಲಯದ ಕುಳಗೇರಿ ರಸ್ತೆಯ ನಿವೇಶನದಲ್ಲಿ ಅನಾಥವಾಗಿರುವ ಇಮ್ಮಡಿ ಪುಲಿಕೇಶಿ ಹಾಗೂ ಬಸವೇಶ್ವರ ಮೂರ್ತಿ
ಬಾದಾಮಿ ಹೊರಲಯದ ಕುಳಗೇರಿ ರಸ್ತೆಯ ನಿವೇಶನದಲ್ಲಿ ಅನಾಥವಾಗಿರುವ ಇಮ್ಮಡಿ ಪುಲಿಕೇಶಿ ಹಾಗೂ ಬಸವೇಶ್ವರ ಮೂರ್ತಿ   

ಬಾದಾಮಿ: ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸ್ವಾಗತ ಶಿಲಾ ಕಮಾನು (ಬಾಗಿಲು) ಮತ್ತು ದಿಕ್ಸೂಚಿ ಫಲಕಗಳು ದುರಸ್ತಿಗೆ ಮತ್ತು ಮೂರ್ತಿಗಳು ಪ್ರತಿಷ್ಠಾಪನೆಗೆ ಕಾಯುತ್ತಿವೆ.

2014-15ರಲ್ಲಿ ಕೇಂದ್ರ ಸರ್ಕಾರದಿಂದ ಪಾರಂಪರಿಕ ಪಟ್ಟಣದ ಅಭಿವೃದ್ಧಿಗೆ ‘ಹೃದಯ’ ಯೋಜನೆಯಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೊಂಡಿದೆ.

‘ಹೃದಯ’ ಯೋಜನೆಯಲ್ಲಿ ಎರಡು ಪುಲಿಕೇಶಿ, ಒಂದು ಬಸವೇಶ್ವರ ಮೂರ್ತಿ, ಬಾದಾಮಿ ರೈಲು ನಿಲ್ದಾಣ, ಗದಗ, ಬಾಗಲಕೋಟೆ, ಕುಳಗೇರಿ ಮುಖ್ಯ ರಸ್ತೆ ಮತ್ತು ಮೇಣಬಸದಿ, ನಾಗನಾಥಕೊಳ್ಳ ರಸ್ತೆಯಲ್ಲಿ ಒಟ್ಟು ಆರು ಶಿಲೆಯ ಸ್ವಾಗತ ಬಾಗಿಲುಗಳನ್ನು ನಿರ್ಮಿಸಲಾಗಿದೆ.

ADVERTISEMENT

ರಸ್ತೆಯಲ್ಲಿ ಆರು ಕಮಾನು (ಶಿಲಾ ದ್ವಾರಗಳು), ಶಿಲೆಯಲ್ಲಿ ನಾಲ್ಕು ಆಶ್ರಯ ತಾಣಗಳು, ವೀರಪುಲಿಕೇಶಿ, ಬಸವೇಶ್ವರ ಮೂರ್ತಿಗಳನ್ನು ಮತ್ತು ತಾಲ್ಲೂಕಿನ ಸ್ಮಾರಕಗಳ ರಸ್ತೆಯಲ್ಲಿ 300ಕ್ಕೂ ಹೆಚ್ಚು ದಿಕ್ಸೂಚಿ ಫಲಕಗಳನ್ನು ಪಾರಂಪರಿಕ ಬಾದಾಮಿ ಶಿಲೆಯಲ್ಲಿ ರೂಪಿಸಿದ್ದಾರೆ.

‘ಕಾಮಗಾರಿ ಮಾಡುವಾಗಲೇ ಕಳಪೆಯಾಗಿದೆ ಎಂದು ಸ್ಥಳೀಯ ಸಂಘಟನೆಗಳು ಪುರಸಭೆಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳ ಮತ್ತು ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಿಲ್ಲ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ ದೂರಿದ್ದಾರೆ.

ದಿಕ್ಸೂಚಿ ಫಲಗಳು ಮುರಿದು ಬಿದ್ದಿವೆ. ಸ್ವಾಗತ ಶಿಲಾದ್ವಾರದ (ಕಮಾನು) ಮೇಲಿಂದ ಐದು ಕಲ್ಲುಗಳು ಬಿದ್ದಿವೆ. ಪಕ್ಕದ ಕಲ್ಲುಗಳು ಸಡಿಲಾಗಿವೆ. ಯಾವಾಗ ಯಾರ ಮೇಲೆ ಬೀಳುತ್ತವೆಯೋ ತಿಳಿಯದಾಗಿದೆ. ರಸ್ತೆಯಲ್ಲಿ ಪ್ರಾಣಾಪಾಯವಾಗುವ ಮುನ್ನವೇ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕಿದೆ.

ಹೃದಯ ಯೋಜನೆಯ ಕಾಮಗಾರಿಗಳನ್ನು ಸರಿಪಡಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ 2024ರ ಡಿ. 7ರಂದು ನಡೆದ ಸಭೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗೆ ಸೂಚನೆ ನೀಡಿದ್ದರೂ ಸಹ ಅಧಿಕಾರಿಗಳು ಇನ್ನೂ ಎಚ್ಚತ್ತುಗೊಂಡಿಲ್ಲ.  

‘ಕಾಮಗಾರಿಯನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡುವುದಿಲ್ಲ. ಜಿಲ್ಲಾ ಮಟ್ಟದ ಸಭೆಯಲ್ಲಿ ಸಿಪಿಡಬ್ಯುಡಿ ಎಂಜಿನಿಯರ್‌ಗೆ ತಿಳಿಸಲಾಗಿದೆ. ಇದುವರೆಗೂ ದುರಸ್ತಿ ಕೈಗೊಂಡಿಲ್ಲ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಪ್ರತಿಕ್ರಿಯಿಸಿದರು.

‘ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸಭೆ ನಡೆದರೂ ಬಾದಾಮಿಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದಿಲ್ಲ. ಪುಲಿಕೇಶಿ ಮತ್ತು ಬಸವೇಶ್ವರ ಮೂರ್ತಿ ಏಕೆ ಪ್ರತಿಷ್ಠಾಪನೆಯಾಗಿಲ್ಲ? ರಸ್ತೆಯಲ್ಲಿನ ಸ್ವಾಗತ ಕಮಾನು ಮತ್ತು ದಿಕ್ಸೂಚಿ ಫಲಕಗಳು ದುರಸ್ತಿಯಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಆಗ್ರಹಿಸಿದ್ದಾರೆ.

ಬಾದಾಮಿ ಮಿನಿ ವಿಧಾನ ಸೌಧ ಸಮೀಪ ಕುಳಗೇರಿ ರಸ್ತೆಯಲ್ಲಿ ‘ಪಾರಂಪರಿಕ ನಗರ ಬಾದಾಮಿಗೆ ಸ್ವಾಗತ’ ಶಿಲಾ ಕಮಾನಿನ ಮೇಲಿನ ಕಲ್ಲುಗಳು ಉದುರುತ್ತಿದ್ದು ಪ್ರಾಣಾಪಾಯಕ್ಕೆ ಕಾದಿವೆ
ಬಾದಾಮಿ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ದಿಕ್ಸೂಚಿ ಶಿಲಾ ಫಲಕಗಳು ಮುರಿದು ನೆಲಕಚ್ಚಿವೆ
ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಯಾರೂ ಬಂದಿಲ್ಲ. ಜಿಲ್ಲಾ ಸಮಿತಿ ಕ್ರಮ ಕೈಗೊಳ್ಳಬೇಕಿದೆ
ಬಿ.ಎಂ. ಡಾಂಗೆ ಮುಖ್ಯಾಧಿಕಾರಿ ಪುರಸಭೆ ಬಾದಾಮಿ
ಕಾಮಗಾರಿ ಮಾಡಿದ ದೆಹಲಿ ಗುತ್ತಿಗೆದಾರರಿಗೆ ನೋಟಿಸ್ ಕಳುಹಿಸಲಾಗಿದೆ. ದೂರವಾಣಿ ಕರೆ ಮಾಡಿದರೆ ಗುತ್ತಿಗೆದಾರ ಸ್ವೀಕರಿಸುತ್ತಿಲ್ಲ. ಬೇರೆಯವರ ಕಡೆಯಿಂದ ದುರಸ್ತಿ ಮಾಡಿಸಲಾಗುವುದು
ಮಂಜುನಾಥ, ಕೇಂದ್ರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.