ADVERTISEMENT

ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ನ್ಯಾ.ವಿಜಯ್

ವಿಶ್ವ ಮಾನವ ಹಕ್ಕುಗಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:49 IST
Last Updated 11 ಡಿಸೆಂಬರ್ 2025, 4:49 IST
ಬಾಗಲಕೋಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಉದ್ಘಾಟಿಸಿದರು
ಬಾಗಲಕೋಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಉದ್ಘಾಟಿಸಿದರು   

ಬಾಗಲಕೋಟೆ: ‘ಸಮಾಜದಲ್ಲಿರುವ ಪ್ರತಿಯೊಬ್ಬರೂ ಬದುಕುವ ಹಕ್ಕಿನೊಂದಿಗೆ ಇತರೆ ಮೂಲಭೂತ ಹಕ್ಕುಗಳನ್ನು ಹೊಂದಿದ್ದು, ಅವುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ‘ನೈಸರ್ಗಿಕವಾಗಿ ಬಂದಂತಹ ಹಕ್ಕುಗಳನ್ನು ಚಲಾಯಿಸುವದರ ಜೊತೆಗೆ ಅವುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ತಿಳಿಸಿದರು. 

‘ಮಾನವ ಹಕ್ಕುಗಳು ಕೇವಲ ಕಾನೂನಿಗೆ ಸೀಮಿತವಲ್ಲ. ಅವು ನಮ್ಮ ಸಮಾಜದ ಭಾಗವಾಗಿದೆ. ಸಂವಿಧಾನ ಎಂಬುದು ಒಂದು ದೊಡ್ಡ ಗ್ರಂಥವಿದ್ದಂತೆ, ಅದರಲ್ಲಿ ಎಲ್ಲ ರೀತಿಯ ಕಾನೂನುಗಳಿದ್ದು, ಅವುಗಳನ್ನು ಸರಿಯಾಗಿ ಪಾಲಿಸದಿದ್ದರೆ ವ್ಯರ್ಥವಾದಂತೆ. ಮೂಲಭೂತ ಹಕ್ಕುಗಳು, ಅದರಲ್ಲಿನ ಸಮಾನತೆ ಸೇರಿದಂತೆ ಇತರೆ ಹಕ್ಕುಗಳಿದ್ದರೂ ಸಹ ಪೂರ್ಣ ಪ್ರಮಾಣದ ಸಮಾನತೆ ಕಾಣಿಸುತ್ತಿಲ್ಲ. ಮಾನವ ಹಕ್ಕುಗಳ ನಿಜವಾದ ಅರ್ಥ ತಿಳಿದು ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಮಾನವೀಯತೆ, ಗೌರವ, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಈ ಎಲ್ಲ ಮೌಲ್ಯಗಳು ಮಾನವ ಹಕ್ಕುಗಳ ಜೀವಾಳವಾಗಿದೆ. ಸಂವಿಧಾನದ  ಪ್ರಕಾರ ಎಲ್ಲರೂ ಸಮಾನರಾಗಿದ್ದೇವೆ. ಮಾತು, ನಂಬಿಕೆ, ಚಿಂತನೆ, ಆಚಾರಗಳಲ್ಲಿ ಸ್ವಾತಂತ್ರ್ಯ, ಬಾಂಧವ್ಯ ಮತ್ತು ಪರಸ್ಪರ ಗೌರವ ಹೊಂದಿರುತ್ತಾರೆ. ಸಂವಿಧಾನದ ಭೂಮಿಕೆ, ಮೂಲ ಹಕ್ಕುಗಳು, ನ್ಯಾಯಾಂಗದ ರಕ್ಷಣೆ ಮತ್ತು ರಾಜ್ಯದ ಕರ್ತವ್ಯಗಳು ಇವೆಲ್ಲದರ ಗುರಿ ಒಂದೇ ಮಾನವ ಗೌರವದ ಸಂರಕ್ಷಣೆಯಾಗಿದೆ’ ಎಂದರು.

ಸಮಾನತೆ, ಶೋಷಣೆಯಿಂದ ಮುಕ್ತಿ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಮತ್ತು ಶಿಕ್ಷಣ ಹಕ್ಕು, ಸಂವಿಧಾನಿಕ ಪರಿಹಾರ ಹಕ್ಕು ಸೇರಿದಂತೆ ಇತರೆ ಹಕ್ಕುಗಳು ಮಾನವನಿಗೆ ನೀಡಿದೆ. ಸಾಮಾಜಿಕ ನ್ಯಾಯ ಅಂಬೇಡ್ಕರ್‌ ಅವರ ಕನಸಾಗಿದ್ದು, ಮಾನವ ಹಕ್ಕುಗಳ ಪುನರುತ್ಥಾನಕ್ಕೆ ಜೀವ ತತ್ವ ನೀಡಿದ್ದಾರೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾನೂನು ಅಭಿರಕ್ಷಕ ಪಿ.ಎಚ್. ಮಾಳೇದ, ಮಾನವ ಹಕ್ಕುಗಳ ಕುರಿತು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು. 

ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಗದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ತಹಶೀಲ್ದಾರ್ ವಾಸುದೇವಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.