ಬಾಗಲಕೋಟೆ: ‘ದೇಶವನ್ನು ಭಾರತ ಅಥವಾ ಇಂಡಿಯಾ ಎಂದು ಕರೆಯಲು ಭಾರತೀಯರು ಮುಕ್ತ ಅವಕಾಶ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ವಿಷಯ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸುತ್ತೇನೆ’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
‘ಭಾರತ ಎಂದು ಕರೆಯಬಹುದು ಎಂದು ಸಿದ್ದರಾಮಯ್ಯನವರಿಗೆ ಹೇಳಿದರೆ, ಸುಪ್ರೀಂ ಕೋರ್ಟ್ ಆದೇಶ ಓದಿಲ್ಲ ಎನ್ನುತ್ತಾರೆ. ಅದಕ್ಕೆ ಅವರಿಗೆ ಪತ್ರಿಕೆಯನ್ನು ಕಳುಹಿಸುತ್ತೇನೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಕಾಂಗ್ರೆಸ್ ಸೇರಿ 25 ಪಕ್ಷಗಳು ಸೇರಿ ಇಂಡಿಯಾ ಒಕ್ಕೂಟ ಮಾಡಿಕೊಂಡಿದ್ದಕ್ಕೆ ಹೆದರಿ ಭಾರತ ಎನ್ನಲಾಗುತ್ತಿದೆ ಎಂಬುದು ಸುಳ್ಳು. 25 ಅಲ್ಲ, 108 ಪಕ್ಷಗಳು ಸೇರಲಿ. ಭಾರತ ಮಾತಾಕೀ ಜೈ ಎಂದು ಹೇಳಿಕೊಂಡೇ ಬಂದಿದ್ದೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇಡೀ ವಂಶವೇ ಬಂದರೂ ಪ್ರಧಾನಿ ಮೋದಿ ಅವರನ್ನು ಅಲ್ಲಾಡಿಸಲು ಆಗದು’ ಎಂದರು.
‘ಭಾರತ ಎಂದು ಕರೆಯುವ ಮೂಲಕ ಎಲ್ಲರಲ್ಲಿ ರಾಷ್ಟ್ರಭಕ್ತಿ ಜಾಗೃತಿಗೊಳ್ಳಲಿ ಎಂಬ ಕಾರಣಕ್ಕೆ ಬದಲಾವಣೆ ಮಾಡಲಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.