
ಸಾಂದರ್ಭಿಕ ಚಿತ್ರ
ಇಳಕಲ್: ಹುನಗುಂದ ಮತಕ್ಷೇತ್ರದ ಗ್ರಾಮೀಣ ಭಾಗ ಸಂಪರ್ಕಿಸುವ ಬಹಳಷ್ಟು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿರುವ ಅಭಿವೃದ್ಧಿ ಎಷ್ಟು ಎನ್ನುವುದಕ್ಕೆ ರಸ್ತೆಗಳೇ ಸಾಕ್ಷಿಯಾಗಿವೆ ಎಂದು ಬಿಜೆಪಿ ಮುಖಂಡ ವಿರೇಶ ಉಂಡೋಡಿ ಟೀಕಿಸಿದರು.
ಅವರು ಸೋಮವಾರ ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ವಿರೋಧ ಪಕ್ಷವಾಗಿ ಬಿಜೆಪಿ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ, ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದೆವು. ಶಾಸಕರು ಸಾಕ್ಷಿ ಕೇಳಿದ್ದಾರೆ. ಹಾಳಾಗಿರುವ ರಸ್ತೆಗಳು, ಹಳ್ಳಗಳಲ್ಲಿ ಬಿದ್ದಿರುವ ಗುಂಡಿಗಳೇ ಸಾಕ್ಷಿಯಾಗಿವೆ. ಹಾಗಾಗಿ ಬೇರೆ ಸಾಕ್ಷಿ ಬೇಕಿಲ್ಲ ಎಂದು ಉಂಡೋಡಿ ಟೀಕಿಸಿದರು.
ಶಾಸಕರು ಬಿಜೆಪಿ ನಾಯಕರ ಬಗ್ಗೆ ಮಾತನಾಡುವುದನ್ನು ಬಿಟ್ಟು, ನಿಮ್ಮ ಪಕ್ಷದ ಮುಖಂಡರು ಯಾಕೆ ನಿಮ್ಮ ಹತ್ತಿರ ಬರುತ್ತಿಲ್ಲ ಎನ್ನುವ ಬಗ್ಗೆ ಗಮನಕೊಡಿ. ನಾನು ಯಾರ ಸಂಪರ್ಕದಲ್ಲಿದ್ದೆ ಎನ್ನುವುದನ್ನು ಶಾಸಕ ಕಾಶಪ್ಪನವರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ರಾಜುಗೌಡ ಪಾಟೀಲ ಮಾತನಾಡಿ, ಅಭಿವೃದ್ಧಿ ಮಾಡಿದ್ದರೆ ಎಲ್ಲಿವೆ ತೋರಿಸಿ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಬಡ ನೇಕಾರರು ದಿನವಿಡಿ ಕೆಲಸ ಮಾಡಿ, ರಾತ್ರಿ ನೀರಿಗಾಗಿ ಕಾಯುತ್ತಿದ್ದಾರೆ. ಗೌರವ ಕೊಟ್ಟು ಮಾತನಾಡಿದರೆ ನಾವೂ ಗೌರವ ಕೊಡ್ತಿವಿ. ಇಲ್ಲದಿದ್ದರೇ ನಿಮ್ಮ ಭಾಷೆಯಲ್ಲಿಯೇ ಉತ್ತರ ನೀಡ್ತಿವಿ ಎಂದು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಅಜ್ಜಪ್ಪಗೌಡ ನಾಡಗೌಡರ, ಅಶೋಕ ಬಂಡರಗಲ್ಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಗಡಿಯಣ್ಣವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.