ಬಾಗಲಕೋಟೆ:ಪ್ರವಾಹದಿಂದ ತತ್ತರಗೊಂಡಿರುವ ಗ್ರಾಮಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮುಧೋಳ ತಾಲ್ಲೂಕಿನ ಜೀರಗಾಳ ಗ್ರಾಮದ ಸಂತ್ರಸ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ವಿಜಯಪುರ - ಧಾರವಾಡದ ಪ್ರಮುಖ ರಸ್ತೆ ಮಾರ್ಗವನ್ನು ಬೆಳಗ್ಗೆಯಿಂದಲೇ ಗ್ರಾಮಸ್ಥರು ರಸ್ತೆ ತಡೆ ಮಾಡಿ ದಿಢೀರ್ ಪ್ರತಿಭಟನೆ ಕೈಗೊಂಡರು. ಈ ಹಿನ್ನೆಲೆ ಕಿಲೊ ಮೀಟರ್ ಉದ್ದದವರೆಗೆ ರಸ್ತೆಯ ಎರಡೂ ಕಡೆ ವಾಹನಗಳು ನಿಂತಿದ್ದವು. ಇದರಿಂದ ಶಾಲಾ ಮಕ್ಕಳು, ಕಚೇರಿಗೆ ಹೋಗುವವರು ಸೇರಿದಂತೆ ಇತರ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ಘಟಪ್ರಭಾ ನದಿಯ ಪ್ರವಾಹದಿಂದ ಕಂಗೆಟ್ಟಿರುವ ಜೀರಗಾಳ ಗ್ರಾಮಸ್ಥರಿಗೆ ಸರಿಯಾದ ಪರಿಹಾರ ನೀಡಿಲ್ಲ. ಬೆಳೆಗಳಿಗೆ ಹಾನಿ ಆಗಿದ್ದು, ಪೀಕು ಇಲ್ಲದೇ ಜೀವನ ನಡೆಸಲು ದುಸ್ತರವಾಗಿದೆ. ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಥಳಕ್ಕೆ ಬಂದು ಸೂಕ್ತ ಭರವಸೆ ನೀಡುವವರೆಗೂ ಹೋರಾಟ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಇದರಿಂದ ಪೊಲೀಸರು ಹಾಗೂ ಸಂತ್ರಸ್ತರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ತಹಶೀಲ್ದಾರ ಸುಹಾಸ್ ಇಂಗಳೆ ಹಾಗೂ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಣ್ಣ ಕೋಮಾರ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿದರು. ಸೂಕ್ತ ಪರಿಹಾರ ನೀಡುವ ಜೊತೆಗೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.
ಇದರಿಂದ ವಿಜಯಪುರ - ಧಾರವಾಡ ರಸ್ತೆಯಲ್ಲಿ ಸಂಚಾರ ದಟ್ಟಣೆಉಂಟಾಗಿತ್ತು. ಪ್ರಯಾಣಿಕರು ಗಂಟೆಗಟ್ಟಲೇ ರಸ್ತೆಯಲ್ಲಿಯೇ ಪರದಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.