ADVERTISEMENT

ಬಾಗಲಕೋಟೆ: ಪರೀಕ್ಷಾ ಕೊಠಡಿಯಲ್ಲಿ ಅನಾರೋಗ್ಯಕ್ಕೀಡಾಗಿದ್ದ ಬಾಲೆಗೆ 625 ಅಂಕ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 15:39 IST
Last Updated 9 ಆಗಸ್ಟ್ 2021, 15:39 IST
 ಬಸವರಾಜ ಹಾಗೂ ಗೀತಾ ದಂಪತಿ ಪುತ್ರಿ ಗಂಗಮ್ಮ ಹುಡೇದ
ಬಸವರಾಜ ಹಾಗೂ ಗೀತಾ ದಂಪತಿ ಪುತ್ರಿ ಗಂಗಮ್ಮ ಹುಡೇದ   

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆಯ ದಿನ ಉಸಿರಾಟದ ತೊಂದರೆಗೀಡಾಗಿ ಪರೀಕ್ಷಾ ಕೊಠಡಿಯಿಂದ ಆಸ್ಪತ್ರೆಗೆ ತೆರಳಿದ್ದ ವಿದ್ಯಾರ್ಥಿನಿ ಗಂಗಮ್ಮ ಹುಡೇದ 625ಕ್ಕೆ 625 ಅಂಕ ಪಡೆದಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ಬಸವರಾಜ ಹಾಗೂ ಗೀತಾ ದಂಪತಿ ಪುತ್ರಿ ಗಂಗಮ್ಮ ಹುಡೇದ ಅಲ್ಲಿನ ದುರ್ಗಾದೇವಿ ಖಾಸಗಿ ಶಾಲೆಯ ವಿದ್ಯಾರ್ಥಿನಿ.

ಬಸವರಾಜ ಎಲೆಕ್ಟ್ರಿಶಿಯನ್, ಗೀತಾ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದ ಮಧ್ಯೆಯೂ ಮಗಳು ಈ ಸಾಧನೆ ಮಾಡಿರುವುದು ಕುಟುಂಬದಲ್ಲಿ ಸಂಭ್ರಮ ಮೂಡಿಸಿದೆ. ಸೋಮವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಗಳಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು. ದುರ್ಗಾದೇವಿ ಶಾಲೆಯ ಶಿಕ್ಷಕರು ಮನೆಗೆ ತೆರಳಿ ಗಂಗಮ್ಮನಿಗೆ ಅಭಿನಂದನೆ ಸಲ್ಲಿಸಿದರು.

ADVERTISEMENT

'ಪರೀಕ್ಷೆ ದಿನ ಮಗಳಿಗೆ ಅನಾರೋಗ್ಯ ಕಾಡಿತ್ತು. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಆಗಿತ್ತು. ನಂತರ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿದ್ದಳು. ಈಗಲೂ ಪೂರ್ಣ ಗುಣಮುಖಳಾಗಿಲ್ಲ' ಎಂದು ಪೋಷಕರು ತಿಳಿಸಿದರು.

'ದಿನಕ್ಕೆ ಮೂರ್ನಾಲ್ಕು ಗಂಟೆ ಓದುತ್ತಿದ್ದೆನು. ಅಪ್ಪ-ಅಮ್ಮ ಹಾಗೂ ಶಾಲೆಯಲ್ಲಿ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಿದರು. 625 ಅಂಕ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ನಾನು ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬುದು ಪೋಷಕರ ಆಶಯ. ಅದನ್ನು ಈಡೇರಿಸಲು ಪ್ರಯತ್ನಿಸುವೆ' ಎಂದು ಗಂಗಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.