ಬಾದಾಮಿ: ಜಮೀನು ಲಾವಣಿಗೆ ಪಡೆದು ಅದರಲ್ಲಿ ಸೌತೆಕಾಯಿ ಬೆಳೆಯುವ ಮೂಲಕ ತಾಲ್ಲೂಕಿನ ಜಾಲಿಹಾಳದ ರೈತ ಅಮೀನಸಾಬ್ ಕಾಮದಾರ್ ಮತ್ತು ಮಾಬುಸಾಬ್ ಕಾಮದಾರ್ ಮಾದರಿಯಾಗಿದ್ದಾರೆ.
ಈ ಚಿಕ್ಕಪ್ಪ ಮತ್ತು ಮಗ ಸ್ವಂತ ಜಮೀನು ಹೊಂದಿದ್ದಾರೆ. ಆದರೆ ಅದು ಖುಷ್ಕಿಯಾಗಿದ್ದು, ಮಳೆ ಸರಿಯಾಗಿ ಬರದ ಹಿನ್ನೆಲೆಯಲ್ಲಿ ಅದರಿಂದ ಬೆಳೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೊಳವೆಬಾವಿ ಇದ್ದ ಎರಡು ಎಕರೆ ಜಮೀನನ್ನು ಲಾವಣಿ ಹಿಡಿದರು.
ಅಲ್ಲಿ ಹನಿನೀರಾವರಿಯ ಮೂಲಕ ಸೌತೆಕಾಯಿ ಹಾಗೂ ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ.
‘ಮೊದಲು ಗೋವಿನಜೋಳ, ಶೇಂಗಾ ಬೆಳೆಯುತ್ತಿದ್ದೆವು. ಆದರೆ, ಅವುಗಳಿಗೆ ಸರಿಯಾದ ದರ ಸಿಗಲಿಲ್ಲ. ನೀರು ಸಹ ಕಡಿಮೆಯಾಯಿತು. ಕಾರಣ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ತರಕಾರಿ ಬೆಳೆಯಲು ಪ್ರಾರಂಭಿಸಿದೆವು’ ಎನ್ನುತ್ತಾರೆಅಮೀನಸಾಬ್ ಕಾಮದಾರ್.
‘ಪ್ರತಿ ಎಕರೆಗೆ 4 ಪ್ಯಾಕೆಟ್ ಗುಜರಾತ್ ಸವತೆ ಬಿತ್ತನೆ ಬೀಜವನ್ನುಅಂದಾಜು ₹25 ಸಾವಿರ ವೆಚ್ಚದಲ್ಲಿ ನಾಟಿ ಮಾಡಲಾಗಿದ್ದು, 135 ದಿನಗಳ ನಂತರ ಇಳುವರಿ ಪ್ರಾರಂಭವಾಗುತ್ತದೆ. ಈ ಸೌತೆಕಾಯಿ ಗಾತ್ರ, ಬಣ್ಣ ಉತ್ತಮವಾಗಿರುತ್ತದೆ’ ಎನ್ನುತ್ತಾರೆ ಅವರು.
‘ಸತತ ಎರಡು ತಿಂಗಳು ಸೌತೆಕಾಯಿ ಫಸಲು ಬರುತ್ತದೆ. ಎರಡು ತಿಂಗಳ ಅವಧಿಯಲ್ಲಿ ಸೌತೆಕಾಯಿ ಬಳ್ಳಿಯಿಂದ ಅವುಗಳನ್ನು ಬೇರ್ಪಡಿಸಲು ಸಾವಿರಕ್ಕೂ ಅಧಿಕ ಮಹಿಳಾ ಕೂಲಿ ಕಾರ್ಮಿಕರಿಗೆ ಉದ್ಯೋಗವನ್ನು ಕೊಡುತ್ತೇವೆ. ನಿತ್ಯ 30ರಿಂದ 50 ಬುಟ್ಟಿ ಸೌತೆಕಾಯಿ ಮಾರುಕಟ್ಟೆಗೆ ಕಳಿಸುತ್ತೇವೆ. ಒಂದು ಬುಟ್ಟಿಯಲ್ಲಿ 12 ಕೆ.ಜಿಯಿಂದ 15 ಕೆ.ಜಿಸೌತೆಕಾಯಿ ಬರುತ್ತದೆ’ ಎನ್ನುತ್ತಾರೆ. ಸೌತೆಕಾಯಿಗಳನ್ನು ಬಾದಾಮಿ, ರೋಣ, ಕೆರೂರ, ರಾಮದುರ್ಗ, ನರಗುಂದ, ಶಿರೋಳ, ಬಾಗಲಕೋಟೆ ಸಾಗಿಸಲಾಗುತ್ತದೆ. ಈ ಸವತೆಕಾ ಯಿಂದ ಖರ್ಚು ಕಳೆದ ₹1.5 ಲಕ್ಷದ ವರೆಗೆ ನಿವ್ವಳ ಲಾಭ ಬರುತ್ತದೆ.ಸೌತೆಕಾಯಿ ಬಳಿಕ ಎಕರೆಗೆ ₹50 ಸಾವಿರದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ.
ಇದರಿಂದ ನಿವ್ವಳ 2 ಲಕ್ಷ ನಿವ್ವಳ ಲಾಭ ಗಳಿಸುತ್ತಿದ್ದಾರೆ. ಅಮೀನಸಾಬ್ ಕಾಮದಾರ್ ಮೊ 96118 63473
*
ತರಕಾರಿಗೆ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು. ತರಕಾರಿಗೆ ಉತ್ತಮ ದರ ಸಿಗುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ರೈತರು ಮಾರುಕಟ್ಟೆಯ ಜ್ಞಾನ ಹೊಂದಬೇಕು.
-ಅಮೀನಸಾಬ್ ಕಾಮದಾರ್, ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.