ಬಾಗಲಕೋಟೆ: ಕೋವಿಡ್–19 ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯ ಬಿಸಿ ನೇರವಾಗಿ ಮುಧೋಳದ ಗವಿಮಠದ ಆನೆಗೆ ತಟ್ಟಿದೆ.
ಗಜರಾಜನ ದುಃಖಕ್ಕೆ ದನಿಯಾಗಿರುವ ಮಾವುತ ತಮಗೆ ಎದುರಾಗಿರುವ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ನೆರವಿಗೆ ಧಾವಿಸುವಂತೆ ಸಾರ್ವಜನಿಕರಲ್ಲಿ ಮೊರೆ ಇಟ್ಟಿದ್ದಾರೆ.
ಮೂಲತಃ ಚಿಪ್ಪಲಕಟ್ಟಿಯ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸೇರಿದ ಆನೆ 40 ವರ್ಷಗಳಿಂದ ಗವಿಮಠದಲ್ಲಿ ಆಶ್ರಯ ಪಡೆದಿದೆ.
ಲಾಕ್ಡೌನ್ಗೆ ಮುನ್ನ ಮುಧೋಳ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಓಡಾಡಿಕೊಂಡು ಎದುರಿಗೆ ಸಿಕ್ಕವರನ್ನು ಸೊಂಡಿಲು ಎತ್ತಿ ಆಶೀರ್ವದಿಸಿ ಅವರು ಕೊಟ್ಟ ಅಕ್ಕಿ, ಬಾಳೆಹಣ್ಣು, ಬೆಲ್ಲ, ಕಬ್ಬು ಮೆದ್ದು ನೆಮ್ಮದಿಯಾಗಿದ್ದ ಆನೆಗೆ ಲಾಕ್ಡೌನ್ ಬಲವಂತದ ಬಂಧನಕ್ಕೆ ದೂಡಿದೆ. ಹೊರಗೆ ಓಡಾಟವಿಲ್ಲದ ಕಾರಣ ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ. ಜೊತೆಗೆ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದೆ. ಸೊಂಟ ನೋವಿನಿಂದಾಗಿ ಎದ್ದರೆ ಮಲಗಲು, ಮಲಗಿದರೆ ಏಳಲು ಕಷ್ಟಪಡುತ್ತಿದೆ. ನಿತ್ಯ ವೈದ್ಯರು ಬಂದು ಚಿಕಿತ್ಸೆ ನೀಡಿ ಹೋಗುತ್ತಿದ್ದಾರೆ.
ಮಠದಲ್ಲಿ ಸಂಗ್ರಹವಿರುವ ಮೇವು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹೀಗಾಗಿ ಸಾರ್ವಜನಿಕರು ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ದವಸ–ಧಾನ್ಯ, ಕಾಳು–ಕಡಿ, ಅಕ್ಕಿ–ಬೆಲ್ಲ ಕೊಡುವಂತೆ ಮಾವುತ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.