
ರಾಂಪುರ: ಮಹಾ ಶಿವರಾತ್ರಿ ಪ್ರಯುಕ್ತ ಫೆ.16 ರಂದು ಜರುಗುವ ಹುಬ್ಬಳ್ಳಿಯ ಸಿದ್ಧಾರೂಢರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಮೀಪದ ಸಂಗಾಪುರದಿಂದ ಭಕ್ತರು ಬುಧವಾರ ಪಾದಯಾತ್ರೆ ಬೆಳೆಸಿದರು.
ಬೆಳಿಗ್ಗೆ 8 ಗಂಟೆಗೆ ಸಂಗಾಪುರ ಗ್ರಾಮದ ಸಿದ್ಧಾರೂಢ ಮಠದಿಂದ ಪಾದಯಾತ್ರೆ ಹೊರಟ ಭಕ್ತರ ದಂಡು ಹಳ್ಳೂರ ಗ್ರಾಮಕ್ಕೆ ಆಗಮಿಸಿ ಬಸವಣ್ಣ ದೇವರ ದರ್ಶನ ಪಡೆದು ಭಗವತಿ, ಸಂಗಮಕ್ರಾಸ್, ಸೂಳಿಕೇರಿ ಮಾರ್ಗವಾಗಿ ಬಾದಾಮಿ ತಾಲ್ಲೂಕಿನ ಲಕ್ಕಸಕೊಪ್ಪ ಗ್ರಾಮದಲ್ಲಿ ವಾಸ್ತವ್ಯ ಹೂಡಿತು.
ಫೆ.12 ರಂದು ಲಕ್ಕಸಕೊಪ್ಪದಿಂದ ಹೊರಟು ಅಗಸನಕೊಪ್ಪ, ಕೆರೂರ, ಮಮ್ಮಟಗೇರಿ ಮಾರ್ಗವಾಗಿ ಗೋವಿನಕೊಪ್ಪ ತಲುಪಿ ಫೆ.13 ರಂದು ಅಲ್ಲಿಂದ ಕೊಣ್ಣೂರ, ಭೈರನಹಟ್ಟಿ, ನರಗುಂದ ಮಾರ್ಗವಾಗಿ ಹುಣಸಿಕಟ್ಟಿ ತಲುಪಿ ವಾಸ್ತವ್ಯ ಮಾಡಲಿದೆ.
ಫೆ.14 ಹುಣಸಿಕಟ್ಟಿಯಿಂದ ಹೊರಟು ಅಳಗವಾಡಿ, ತಿರ್ಲಾಪುರ, ಬ್ಯಾಹಟ್ಟಿ ಮಾರ್ಗವಾಗಿ ಕುಸುಗಲ್ ತಲುಪಿ ಫೆ.15 ರಂದು ಅಲ್ಲಿಂದ ಹೊರಟು ಕುಸುಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಿದ್ಧಾರೂಢ ಮಠದಲ್ಲಿ ಮಂಗಳಾರತಿ ಸಲ್ಲಿಸಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ತಲುಪಿ ಸಂಜೆ ಅಕ್ಕಲಕೋಟೆ ರೇವಣಸಿದ್ಧ ಶರಣರ ಮಠದಲ್ಲಿ ವಾಸ್ತವ್ಯ ಮಾಡಿ, ಫೆ.16 ರಂದು ಜರುಗುವ ಸಿದ್ಧಾರೂಢರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುವರು.
ಮಧ್ಯಪ್ರದೇಶದ ನರ್ಮದಾ ತೀರದ ಸಿದ್ಧಾರೂಢ ಸ್ವಾಮೀಜಿ, ತೆಗ್ಗಿಯ ವಿದ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಹೊರಟಿದ್ದು, ಮಾರ್ಗ ಮಧ್ಯದಲ್ಲಿ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆಯ ಭಕ್ತರಿಗೆ ಉಪಹಾರ, ಪ್ರಸಾದ ಸೇವೆ ನೀಡಲಾಗುತ್ತಿದೆ. ಪಾದಯಾತ್ರೆಯಲ್ಲಿ ಸಂಗಾಪುರ, ಬೋಡನಾಯಕದಿನ್ನಿ, ಬೆನ್ನೂರು, ಚವಡಾಪುರ, ಬೇವೂರು, ಹಳ್ಳೂರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದಾರೆ ಎಂದು ಯಾತ್ರೆಯ ಉಸ್ತುವಾರಿ ವಹಿಸಿರುವ ಲಕ್ಷ್ಮಣ ದಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.