
ಬಾಗಲಕೋಟೆ: ಅತಿಯಾದ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿತ್ತು. ನಂತರದಲ್ಲಿ ಉಳಿದ ಈರುಳ್ಳಿಗೂ ಬೆಲೆ ಸಿಗದೇ ರೈತರು ಕಂಗಾಲಾಗಿದ್ದರು. ಈಗ ಮೆಕ್ಕೆಜೋಳದ ಬೆಲೆ ಕುಸಿತವಾಗಿದೆ. ನೆರವಿಗೆ ಬರಬೇಕಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡರ ಪ್ರತಿನಿಧಿಗಳು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷ 45 ರಿಂದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಕಳೆದ ಬಾರಿ ಪ್ರತಿ ಕ್ವಿಂಟಲ್ಗೆ ₹2,200 ರಿಂದ 2,500ರವರೆಗೆ ಸಿಕ್ಕಿದ್ದರಿಂದ ಈ ಬಾರಿ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಆದರೆ, ಬೆಲೆಯು ಪ್ರತಿ ಕ್ವಿಂಟಲ್ಗೆ 1,400 ರಿಂದ 1,750ಕ್ಕೆ ಕುಸಿದಿದೆ.
ಕೇಂದ್ರ ಸರ್ಕಾರ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹2,400 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ಸಂಗ್ರಹ ಮಾಡಿಟ್ಟುಕೊಳ್ಳಲು ಸಾಧ್ಯವಾಗದ ರೈತರು ಬಂದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಈಗಾಗಲೇ 450 ಲಕ್ಷ ಕ್ವಿಂಟಲ್ನಷ್ಟು ಮಾರಾಟವಾಗಿದೆ.
ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಬಳಕೆ ಮಾಡಲಾಗುತ್ತಿತ್ತು. ಅದರಿಂದಲೂ ಮೆಕ್ಕೆಜೋಳ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿತ್ತು. ಎಥೆನಾಲ್ ಖರೀದಿಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಸಕ್ಕರೆ ಕಾರ್ಖಾನೆಯವರೂ ಖರೀದಿಗೆ ಮುಂದಾಗುತ್ತಿಲ್ಲ. ರೈತರು ಖರ್ಚು ಮಾಡಿದ ಬೆಲೆಯೂ ಬಾರದೆ ಕಂಗಾಲಾಗಿದ್ದಾರೆ.
ಖರೀದಿ ಕೇಂದ್ರ ಆರಂಭ ಯಾವಾಗ?
ಹೆಸರುಕಾಳು, ಸೂರ್ಯಕಾಂತಿ ಮುಂತಾದ ಉತ್ಪನ್ನಗಳ ಖರೀದಿಗೆ ಈಗಾಗಲೇ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಮೆಕ್ಕೆಜೋಳ ಖರೀದಿಗೆ ಮಾತ್ರ ಖರೀದಿ ಕೇಂದ್ರಗಳು ಆರಂಭವಾಗಿಲ್ಲ. ಪ್ರತಿ ಬಾರಿಯೂ ವಿಳಂಬವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಅಷ್ಟೊತ್ತಿಗೆ ರೈತರು ಸಾಲ ತೀರಿಸಲು, ಕುಟುಂಬದ ಖರ್ಚು ನಿಭಾಯಿಸಲು ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಒಣಭೂಮಿಯಲ್ಲಿ ಒಂದು ಎಕರೆ ಮೆಕ್ಕೆಜೋಳ ಬೆಳೆಯಲು ₹20 ಸಾವಿರಕ್ಕೂ ಹೆಚ್ಚು ಖರ್ಚು ತಗಲುತ್ತದೆ. 15 ರಿಂದ 20 ಕ್ವಿಂಟಲ್ ಇಳುವರಿ ಬರುತ್ತದೆ. ಅದೇ ನೀರಾವರಿ ಪ್ರದೇಶದಲ್ಲಿ ಒಂದು ಎಕರೆಗೆ ₹25 ಸಾವಿರ ಖರ್ಚು ಬರುತ್ತದೆ. ಆದರೆ, ಖರ್ಚು ಮಾಡಿದ ವೆಚ್ಚವೂ ರೈತರಿಗೆ ದಕ್ಕುತ್ತಿಲ್ಲ.
‘ಒಂದು ತಿಂಗಳಿನಿಂದ ಮಾರುಕಟ್ಟೆಗೆ ಮೆಕ್ಕೆಜೋಳ ಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವುದರಿಂದ ಇನ್ನೂ ಒಂದು ತಿಂಗಳು ಬರುವ ನಿರೀಕ್ಷೆ ಇದೆ. ಬೆಂಬಲ ಬೆಲೆಯಡಿ ಖರೀದಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ವಿ.ಡಿ. ಪಾಟೀಲ ತಿಳಿಸಿದರು.
ಕಳೆದ ವರ್ಷ ಮೆಣಸಿನಕಾಯಿ ಬೆಳೆದು ನಷ್ಟ ಅನುಭವಿಸಿದ್ದೆ. ಈ ಬಾರಿ ಮೆಕ್ಕೆಜೋಳ ಬೆಳೆದು ನಷ್ಟವಾಗಿದೆ. ಒಟ್ಟಿನಲ್ಲಿ ನಷ್ಟವೇ ಗತಿ ಎನ್ನುವಂತಾಗಿದೆವೈ. ಗಂಗಾಧರ ಅಮೀನಗಡ