ADVERTISEMENT

ಪ್ರತಿಭಟನೆಗೆ ಬಿಜೆಪಿ ಕೈ ಜೋಡಿಸಲಿ: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ನಂಜಯ್ಯನಮಠ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 10:52 IST
Last Updated 3 ಸೆಪ್ಟೆಂಬರ್ 2021, 10:52 IST
ಎಸ್.ಜಿ.ನಂಜಯ್ಯನಮಠ
ಎಸ್.ಜಿ.ನಂಜಯ್ಯನಮಠ   

ಬಾಗಲಕೋಟೆ: ‘ಪೆಟ್ರೋಲ್–ಡೀಸೆಲ್ ಬೆಲೆ ಒಂದು ರೂಪಾಯಿ ಹೆಚ್ಚಿದರೂ ಬೀದಿಗೆ ಇಳಿಯುತ್ತಿದ್ದ ಬಿಜೆಪಿಯವರು ಈಗಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆದರಿ ಬೆಲೆ ಏರಿಕೆಯ ಬಗ್ಗೆ ಬಾಯಿ ಬಿಡುತ್ತಿಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೋರಾಟದಿಂದಲೇ ನೀವು (ಬಿಜೆಪಿ) ಮೇಲೆ ಬಂದಿದ್ದೀರಿ. ಈಗ ತಾಲಿಬಾನ್‌ನ ಗುಂಡಿಗೆ ಹೆದರಿದ ಕಾಬೂಲ್‌ ಜನರು ಕುಳಿತಂತೆ ಕುಳಿತಿದ್ದೀರಿ. ಎಷ್ಟು ದಿನ ಇದನ್ನು ಸಹಿಸಿಕೊಳ್ಳುತ್ತೀರಿ. ಏಳಿ ಎದ್ದೇಳಿ. ಬೆಲೆ ಕಡಿಮೆ ಮಾಡಿದರೆ ನಿಮಗೆ ಜನರಿಂದ ಗೌರವ ಸಿಗುತ್ತದೆ’ ಎಂದು ಚಾಟಿ ಬೀಸಿದರು.

‘ಬಿಜೆಪಿಯವರು ನಮ್ಮ ವೈರಿಗಳಲ್ಲ. ಸ್ನೇಹಿತರು. ಪ್ರತಿಭಟನೆ ಮಾಡಲು ನಿಮ್ಮ ಪಕ್ಷದ ಶಿಸ್ತು ಅಡ್ಡಿಯಾದರೆ ಮುಖಂಡರಿಗೆ ಪತ್ರ ಬರೆದು ಬೆಲೆ ಏರಿಕೆಯಿಂದ ಆಗಿರುವ ತೊಂದರೆ ಬಗ್ಗೆಮನದಟ್ಟು ಮಾಡಿಕೊಡಿ. ನಾಳೆ ಚುನಾವಣೆಯಲ್ಲಿ ಜನರ ಬಳಿ ಮತ ಕೇಳಲು ಯಾವ ಮುಖ ಇಟ್ಟುಕೊಂಡು ಹೋಗುವುದು ಹೇಗೆ ಎಂದು ಅವರನ್ನು ಪ್ರಶ್ನಿಸಿರಿ’ ಎಂದು ಟೀಕಿಸಿದರು.

ADVERTISEMENT

‘ಚುನಾವಣೆಗೆ ಮುನ್ನ ಸಬ್‌ಕಾ ಸಾಥ್ ದೇಶ್‌ಕಾ ವಿಕಾಸ್ ಎಂದು ಮೋದಿ ಸಾಹೇಬರುಹೇಳಿದ್ದರು. ಅವರೀಗ ಬೆಲೆ ಏರಿಕೆ ಮೂಲಕ ಸಬ್‌ ಕಾ ಸಾಥ್ ಬಿಟ್ಟು, ಸಾವಕಾರ್‌ಕೆ ಸಾಥ್ ಹೊರಟಿದ್ದಾರೆ. ಇದರಿಂದ ದೇಶ ಸತ್ಯನಾಶ ಆಗುತ್ತಿದೆ. ಕೇವಲ ಶ್ರೀಮಂತರ ಜೇಬು
ತುಂಬಿಸುವ ಕೆಲಸದಲ್ಲಿ ಬಿಜೆಪಿ ಸರ್ಕಾರ ನಿರತವಾಗಿದೆ. ಇವರಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ. ಬೆಲೆ ಏರಿಕೆಗೆ ಕಾರಣಗಳೇ ಇಲ್ಲ’
ಎಂದರು.

ಎಚ್.ವೈ.ಮೇಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮುಖಂಡರಾದ ಸುಶಿಲ್‌ಕುಮಾರ್ ಬೆಳಗಲಿ, ರಾಜು ಮನ್ನಿಕೇರಿ, ಮಂಜುನಾಥ ವಾಸನದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.