ಬಾಗಲಕೋಟೆ: ಎರಡು ವರ್ಷಗಳಲ್ಲಿ ಗುಳೇದ ಆಸ್ಪತ್ರೆ ವತಿಯಿಂದ 20 ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದು, 4 ಸಾವಿರ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ಉದಯಕುಮಾರ ಗುಳೇದ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ರೋಣಿಹಾಳ ಗ್ರಾಮದ ಮಹಾದೇವ ರೊಳ್ಳಿ ಅವರ ಎಡಗಾಲಿನ ಮೊಣಕಾಲು ಚಿಪ್ಪು ಮರು ಜೋಡಣೆಯನ್ನು ರೋಬೋಟಿಕ್ ಯಂತ್ರದ ಮೂಲಕ ಸಂಪೂರ್ಣ ಉಚಿತವಾಗಿ ಮಾಡಲಾಗಿದೆ. ಪ್ರತಿ ತಿಂಗಳು ಇಬ್ಬರು, ಮೂವರಿಗೆ ಬೇರೆ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ಬಾಗಲಕೋಟೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಸದೃಢರಾದವರ ಸಂಖ್ಯೆ ಕಡಿಮೆ ಇದೆ. ಬಡ ರೋಗಿಗಳಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಲಾಗುತ್ತಿದೆ. ಆಸ್ಪತ್ರೆ ಆರಂಭವಾದ ಎರಡು ವರ್ಷಗಳಲ್ಲಿ 30 ಸಾವಿರ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 3 ಸಾವಿರ ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಲಾಗಿದೆ ಎಂದರು.
ಒಂದು ಸಾವಿರ ಅಪಘಾತ ಶಸ್ತ್ರಚಿಕಿತ್ಸೆ ಮಾಡಿದ್ದರೆ, 500 ರೋಗಿಗಳಿಗೆ ಬೆನ್ನು ಹುರಿ(ಸ್ಪೈನ್) ಶಸ್ತ್ರಚಿಕಿತ್ಸೆ, 100 ರೋಗಿಗಳಿಗೆ ರೋಬೋಟಿಕ್ ಯಂತ್ರದ ಮೂಲಕ ಮೊಣಕಾಲು ಚಿಪ್ಪು ಮರುಜೋಡಣೆ ಮಾಡಲಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ 24 ಗಂಟೆ ತುರ್ತು ಚಿಕಿತ್ಸೆ, ಅತ್ಯುತ್ತಮ ಸೌಕರ್ಯವುಳ್ಳ ಐಸಿಯು, ಸಿಟಿ ಸ್ಕ್ಯಾನ್, ಹೈಟೆಕ್ ಲ್ಯಾಬ್, ಯುಎಸ್ಜಿ ಸ್ಕ್ಯಾನ್, ಹೈಟೆಕ್ ಡಿಲಕ್ಸ್ ವಾರ್ಡ್, 12 ಹಾಸಿಗೆಗಳ ಐಸಿಯು ವೆಂಟಿಲೇಟರ್ ಸೇವೆ ಹೊಂದಿದೆ. ಇಎನ್ಟಿ, ನರರೋಗ, ಅರಿವಳಿಕೆ, ಜನರಲ್ ಶಸ್ತ್ರಚಿಕಿತ್ಸೆ, ಜನರಲ್ ಮೆಡಿಸಿನ್, ಹೆರಿಗೆ, ಪ್ಲಾಸ್ಟಿಕ್ ಸರ್ಜರಿ, ಯುರೋಲಾಜಿ, ರೋಮಿಟಾಲಜಿ, ಚಿಕ್ಕಮಕ್ಕಳ ವಿಭಾಗ, ಹೈಟೆಕ್ ಫಿಸಿಯೋಥೆರಪಿ ವಿಭಾಗವೂ ಇದೆ ಎಂದರು.
ಮಹಾದೇವ ರೊಳ್ಳಿ ಮಾತನಾಡಿ, ಸಂಪೂರ್ಣವಾಗಿ ತಿರುಗಾಡಲು ಸಾಧ್ಯವಾಗದ ಸ್ಥಿತಿ ಇತ್ತು. ಡಾ.ಗುಳೇದ ಅವರು ಒಂದು ರೂಪಾಯಿ ತೆಗೆದುಕೊಳ್ಳದೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈಗ ತಿರುಗಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಡಾ.ಅಪೂರ್ವಾ ಗುಳೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.