ADVERTISEMENT

ಆರ್‌ಎಸ್‌ಎಸ್‌ ಮುಗಿಸಲು ಯತ್ನಿಸಿದಷ್ಟೂ ಬೆಳವಣಿಗೆ: ಏಡಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ: ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 2:48 IST
Last Updated 6 ಅಕ್ಟೋಬರ್ 2025, 2:48 IST
ಬಾಗಲಕೋಟೆಯಲ್ಲಿ ಭಾನುವಾರ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಯಿತು
ಬಾಗಲಕೋಟೆಯಲ್ಲಿ ಭಾನುವಾರ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಯಿತು   

ಬಾಗಲಕೋಟೆ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುಗಿಸಲು ಯತ್ನಿಸಿದಷ್ಟೂ, ಬೆಳೆಯುತ್ತಿದೆ. ಟೀಕಾಕಾರರ ಸಹಸ್ರ ಟೀಕೆಗಳಿಗೆ ಸಂಘ ಸದಾ ಸ್ವಾಗತ ಬಯಸುತ್ತದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಸಹಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು.

ವಿಜಯದಶಮಿ ಅಂಗವಾಗಿ ಭಾನುವಾರ ಬಿವಿವಿ ಸಂಘದ ಮೈದಾನದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯವಕ್ತಾರರಾಗಿ ಮಾತನಾಡಿದ ಅವರು, ‘ಸಂಘವನ್ನು ಪುರೋಹಿತಶಾಹಿ, ಮನುವಾದಿ ಎಂದೆಲ್ಲ ಟೀಕಿಸಲಾಗುತ್ತದೆ. ದೇಶದಲ್ಲಿ ಭಗವಾಧ್ವಜ ಹಾರಿಸಲು ಒಂದಿಂಚೂ ಜಾಗ ಕೊಡುವುದಿಲ್ಲ. ವಿದೇಶಿ ಶಕ್ತಿ ತಂದು ಸಂಘ ಮಣಿಸುವುದಾಗಿ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಹೇಳಿದ್ದರು. ಅವರ ಅನೇಕ ತಲೆಮಾರುಗಳು ಬಂದರೂ ಸಂಘವನ್ನು ಏನು ಮಾಡಲು ಸಾಧ್ಯವಾಗಲಿಲ್ಲ’ ಎಂದರು.

‘ಸಂಘದ ಸ್ವಯಂಸೇವಕರು ಅಪಮಾನ, ದಬ್ಬಾಳಿಕೆ ಸ್ವೀಕರಿಸಲು ಸಿದ್ಧರಾಗಿದ್ದರು. ಅವರೆಲ್ಲರ ನಿಸ್ವಾರ್ಥ ಸೇವೆಯಿಂದ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ’ ಎಂದರು.

ADVERTISEMENT

‘ದೇಶದಲ್ಲೆಡೆ ಐ ಲವ್ ಮಹಾದೇವ ಅಭಿಯಾನ ಚಾಲ್ತಿಯಲ್ಲಿದೆ. ಅದು ಪಾರ್ವತಿಯ ಪತಿ ಶಂಕರನನ್ನು ಕುರಿತು ಹೇಳಿದ್ದೇ ವಿನಃ ಸಂಘದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ದೇವನೂರ ಮಹಾದೇವರ ಕುರಿತಾಗಿ ಹೇಳುತ್ತಿಲ್ಲ’ ಎಂದು ಕಟೀಕಿಸಿದರು.

ಉದ್ಯಮಿ ವಿಲಾಸ ಬದಾಮಿ, ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ ಇದ್ದರು. 

ಪಥ ಸಂಚಲನ: ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು. ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅದ್ದೂರಿ ಅಲಂಕಾರ ಮಾಡಲಾಗಿತ್ತು.

ಬಸವೇಶ್ವರ ಕಾಲೇಜಿನ ಮೈದಾನದಿಂದ ಎರಡು ಪ್ರತ್ಯೇಕ ಮಾರ್ಗದ ಘೋಷ್ ಪಥಸಂಚಲನಗಳು ಹೊರಟವು. ಪಥಸಂಚಲನವನ್ನು ರಸ್ತೆ ಬದಿ ನಿಂತು ಜನರು ವೀಕ್ಷಿಸಿದರು.

ನಗರದಾದ್ಯಂತ ಕೇಸರಿ ಕಮಾನುಗಳು, ಬಂಟಿಂಗ್ಸ್, ಫ್ಲೆಕ್ಸ್‌ಗಳು ಗಮನಸೆಳೆದವು. ಪಥಸಂಚಲನ ಮಾರ್ಗದಲ್ಲಿ ರಂಗೋಲಿ ಬಿಡಿಸಲಾಗಿತ್ತು. ಕ್ರಾಂತಿಕಾರಿಗಳ ವೇಷಭೂಷಣದಲ್ಲಿ ಮಕ್ಕಳು ಗಮನ ಸೆಳೆದರು.

ಎರಡು ಮಾರ್ಗಗಳ ಪಥಸಂಚಲನಗಳು ಬಸವೇಶ್ವರ ವೃತ್ತದಲ್ಲಿ ಕೂಡಿದವು. ವೃತ್ತದ ಸುತ್ತಲಿರುವ ಬೃಹತ್ ಕಟ್ಟಡಗಳುದ್ದಕ್ಕೂ ಜನರ ದಂಡು ಕಂಡು ಬಂದಿತು. 

ಬಾಗಲಕೋಟೆಯಲ್ಲಿ ಭಾನುವಾರ ನಡೆದ ಪಥ ಸಂಚಲನ ಸಂದರ್ಭದಲ್ಲಿ ಗಣವೇಷಧಾರಿಗಳಾಗಿದ್ದ ನಾರಾಯಣ ಭಾಂಡಗೆ ವೀರಣ್ಣ ಚರಂತಿಮಠ

ಗಮನ ಸೆಳೆದ ಚರಂತಿಮಠ

ಬಾಗಲಕೋಟೆ: ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಗಣವೇಷಧಾರಿಗಳಾಗಿ ಗಮನ ಸೆಳೆದರು. ಸಂಸದ ಪಿ.ಸಿ.ಗದ್ದಿಗೌಡರ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ ಹಣಮಂತ ನಿರಾಣಿ ಮತ್ತಿತರರು ಪಥಸಂಚಲನ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.