ADVERTISEMENT

ಕುರುಬ ಸಮಾವೇಶಕ್ಕೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ: ಈಶ್ವರಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 5:28 IST
Last Updated 29 ನವೆಂಬರ್ 2020, 5:28 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ – ಪ್ರಜಾವಾಣಿ ಚಿತ್ರ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ – ಪ್ರಜಾವಾಣಿ ಚಿತ್ರ   

ಬಾಗಲಕೋಟೆ: ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ನಗರದಲ್ಲಿ ಭಾನುವಾರ ಆಯೋಜಿಸಿರುವ ಬೆಳಗಾವಿ ವಿಭಾಗಮಟ್ಟದ ಕುರುಬ ಸಮಾಜದ ಸಮಾವೇಶಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷ ಬೆಂಬಲ ನೀಡಿದ್ದಾರೆ. ಅವರು ಬಾರದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಕಾಗಿನೆಲೆ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮಾಜದ ಮೀಸಲಾತಿ ಹೋರಾಟದ ವಿರೋಧಿಯಲ್ಲ. ಅವರಿಗೂ ಒಪ್ಪಿಗೆ ಇದೆ, ಸಮಾವೇಶದಲ್ಲಿ ಮಾತ್ರ ಭಾಗವಹಿಸುತ್ತಿಲ್ಲ. ಒಪ್ಪಿಗೆ ಪಡೆದೇ ಈ ಸಮಾವೇಶ ಮಾಡ್ತಿದ್ದೇವೆ. ಅವರು ವಿರುದ್ದ ದಿಕ್ಕಿನಲ್ಲಿ ಇಲ್ಲ, ಈಶ್ವರಪ್ಪ- ಸಿದ್ದರಾಮಯ್ಯ ನಡುವೆ ಒಂದೇ ವಿಚಾರ ಇದೆ ಎಂದರು.

ಮೀಸಲಾತಿಗೆ ಆಗ್ರಹಿಸಿ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಆರಂಭಿಸಲಿದ್ದೇವೆ. ಪಾದಯಾತ್ರೆ ಫೆ.7ಕ್ಕೆ ಬೆಂಗಳೂರಲ್ಲಿ ಸೇರಲಿದೆ. ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ. ಈ ವೇಳೆ ಸಿದ್ದರಾಮಯ್ಯ- ಈಶ್ವರಪ್ಪ ಅವರನ್ನು ಒಂದೇ ವೇದಿಕೆಗೆ ತರಲು ಪ್ರಯತ್ನಿಸಲಾಗುವುದು ಎಂದರು.

ಈ ಸಮಾವೇಶದ ಮೂಲಕ ಈಶ್ವರಪ್ಪ ಅವರ ಪುತ್ರ ಕಾಂತೇಶ ಅವರನ್ನು ಮುನ್ನಲೆಗೆ ತರಲಾಗುತ್ತಿದೆ ಎಂಬುದು ಸುಳ್ಳು. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.