ಕುಳಗೇರಿ ಕ್ರಾಸ್ ಸಮೀಪದ ತಳಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಶಾಲೆಯ 100 ವಿದ್ಯಾರ್ಥಿಗಳಿಗೆ ಗ್ರಾಮದ ಗುರು-ಹಿರಿಯರು ಪುಸ್ತಕಗಳನ್ನು ವಿತರಣೆ ಮಾಡಿದರು
ಕುಳಗೇರಿ ಕ್ರಾಸ್: ಸಮೀಪದ ತಳಕವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 112 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಪತ್ರಕರ್ತ ಶರಣು ಚಕ್ರಸಾಲಿ ಅವರು ‘ಕುಂಬಾರ ಮಾಸ್ತರ ಗ್ರಂಥ ಮಾಲೆ’ಯನ್ನು ಸ್ಥಾಪನೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ 100 ಮಕ್ಕಳ ಪುಸ್ತಕಗಳನ್ನು ಉಚಿತವಾಗಿ ನೀಡಿದರು.
ಚಕ್ರಸಾಲಿ ಅವರು ತಮ್ಮ ಮುತ್ತಜ್ಜ ಅಡಿವೆಪ್ಪ ಹೊಳೆಯಪ್ಪ ಕುಂಬಾರ ಅವರ ಸ್ಮರಣಾರ್ಥವಾಗಿ ಗ್ರಂಥಮಾಲೆ ಸ್ಥಾಪಿಸಿದರು. 1912ರಲ್ಲಿ ಬಾದಾಮಿಯತಳಕವಾಡ ಗ್ರಾಮದಲ್ಲಿ ಶಾಲೆ ಪ್ರಾರಂಭವಾಗಿದ್ದು, ಮೊದಲ ಶಿಕ್ಷಕ ಹಾಗೂ ಮುಖ್ಯಶಿಕ್ಷಕರಾಗಿದ್ದ ಅಡಿವೆಪ್ಪ ಕುಂಬಾರ ಸೇವೆ ಮಾಡಿದ್ದರು.
ಶಾಲೆಯಲ್ಲಿ 1 ರಿಂದ 8 ನೇ ತರಗತಿಯ ವರೆಗೂ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಸದ್ಯ 107 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. 2024ರಲ್ಲಿ ನಡೆದ ಶಾಲೆಯ ಹೊಸ ಕಟ್ಟಡ ಉದ್ಘಾಟನೆ ಮತ್ತು ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗ್ರಂಥ ಮಾಲೆ ಸ್ಥಾಪಿಸುವ ಆಶಯವ್ಯಕ್ತಪಡಿಸಿದ ಶರಣು ಚಕ್ರಸಾಲಿ ಅವರು ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎಸ್.ಡಿ.ಎಂ.ಸಿ ಸಿಬ್ಬಂದಿ ಮತ್ತು ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು.
‘ಶಾಲೆಯಲ್ಲಿ ಉತ್ತಮವಾದ ಗ್ರಂಥಾಲಯ ಇರಬೇಕು ಎಂಬುದು ನನ್ನ ಕನಸು, ಈ ನಿಟ್ಟಿನಲ್ಲಿ ಈ ಕೆಲಸ ಮಾಡಿರುವೆ, ಸೃಜನಶೀಲತೆ ಹೆಚ್ಚಿಸುವಲ್ಲಿಯೂ ಈ ಪುಸ್ತಗಳು ನೆರವಾಗುತ್ತವೆ’ ಎಂದು ಶರಣು ಚಕ್ರಸಾಲಿ ತಿಳಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕನಗೌಡ ತೆಗ್ಗಿನಮನಿ, ಗ್ರಾ.ಪಂ ಸದಸ್ಯ ವೀರಯ್ಯ ಮೂಗುನೂರಮಠ, ಈರನಗೌಡ ರಾಮನಗೌಡ್ರ ಗ್ರಾಮದ ಹಿರಿಯರು, ಶಾಲೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಪ್ರಭಾರ ಮುಖ್ಯಶಿಕ್ಷಕ ಬಸವರಾಜ ಹಿರ್ಲವರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.