ಬೀಳಗಿ: ‘ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ, ದೇಶಪ್ರೇಮ ಸದಾ ಸ್ಮರಣೀಯ’ ಎಂದು ಬೀಳಗಿ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್ ಸೊನ್ನದ ಹೇಳಿದರು.
ಸಮೀಪದ ಮನ್ನಿಕೇರಿ ಗ್ರಾಮದಲ್ಲಿ ಭಾನುವಾರ 17 ವರ್ಷಗಳ ಸೇವಾ ನಿವೃತ್ತಿ ಪಡೆದು ಶಿವಲಿಂಗಪ್ಪ ಕರಿಯಪ್ಪ ಮಮದಾಪುರ ಸ್ವಗ್ರಾಮಕ್ಕೆ ಮರಳಿದ ಹಿನ್ನೆಲೆಯಲ್ಲಿ ಚಂದ್ರಾದೇವಿ ನೌಕರರ ಸಂಘ ಹಾಗೂ ಗ್ರಾಮಸ್ಥರಿಂದ ಏರ್ಪಡಿಸಿದ್ದ ಸ್ವಾಗತ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕ ಜಿ.ಆರ್ ಹವೇಲಿ, ನಿವೃತ್ತ ಶಿಕ್ಷಕ ಎಚ್.ಎಸ್ ದಳವಾಯಿ ಮಾತನಾಡಿದರು. ಯಲ್ಲಪ್ಪ ಹಂಡಿ, ಶಿಕ್ಷಕರಾದ ಸೋಮಲಿಂಗ ಬೇಡರ, ವಿ.ಆರ್. ಪೂಜೇರಿ, ನಿವೃತ್ತ ಯೋಧ ಮಲ್ಲಪ್ಪ ಮಮದಾಪುರ, ಸಂಗಪ್ಪ ಮೇಟಿ, ಪರಸಪ್ಪ ಛಬ್ಬಿ, ರಮೇಶ ಛಬ್ಬಿ, ಯಲಗುರ್ದಪ್ಪ ದಳವಾಯಿ, ಸಂಗಪ್ಪ ಬಗಲಿ, ಮಂಜುನಾಥ ಬಾರಕೇರ, ಸಿದ್ದಪ್ಪ ಛಬ್ಬಿ, ರಾಜು ನದಾಫ ಇದ್ದರು.
ಅದ್ದೂರಿ ಮೆರವಣಿಗೆ: ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮೂಲಕ ಯೋಧನಿಗೆ ಸ್ವಾಗತ ಕೋರಿದರು. ಡೊಳ್ಳು ಭಾಜಾಭಜಂತ್ರಿ ಕುಣಿತದ ಸಂಭ್ರಮದೊಂದಿಗೆ ತೆರೆದ ವಾಹನದಲ್ಲಿ ಗ್ರಾಮದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಗ್ರಾಮದ ಯುವಕರು, ವಿದ್ಯಾರ್ಥಿಗಳು ಹಾಗೂ ಹಿರಿಯರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಜೈಘೋಷ ಹಾಕಿ ದೇಶಪ್ರೇಮ ಮೆರೆದರು. ಗ್ರಾಮದಲ್ಲಿನ ಬಂಧು, ಮಿತ್ರರು, ಯುವಕರು ಯೋಧನಿಗೆ ಆರತಿ ಬೆಳಗಿ, ಸನ್ಮಾನಿಸಿ ಗೌರವಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.