ರಬಕವಿ ಬನಹಟ್ಟಿ: ‘ಸರ್ಕಾರ ರೈತರ ಸಾಲದಂತೆ ನೇಕಾರರ ಸಾಲವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಸಹಕಾರ ಕ್ಷೇತ್ರ ಬೆಳೆದಿದೆ. ಸಹಕಾರ ಸಂಘದಿಂದ ಪಡೆದ ಸಾಲವನ್ನು ಹಿಂದಿರುಗಿಸಿ ಸ್ವಾಭಿಮಾನದ ಜೀವನ ನಡೆಸಬೇಕು‘ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾನುವಾರ ಧನಲಕ್ಷ್ಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನೆ ಮತ್ತು ಧನಶ್ರೀ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, ‘ಸಂಘದ ಅಭಿವೃದ್ಧಿ ಸಂದರ್ಭದಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಗ್ರಾಹಕರ ಹಿತರಕ್ಷಣೆ ಮಾಡುವುದರ ಜೊತೆಗೆ ಗ್ರಾಹಕರ ವಿಶ್ವಾಸಕ್ಕೂ ಪಾತ್ರರಾಗಬೇಕು’ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಚಿದಾನಂದ ಗಾಳಿ ಮಾತನಾಡಿ, ‘ಸಂಘವು ನಗರದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಸಂಘವು ತನ್ನ ಷೇರುದಾರರಿಗೆ ಎರಡು ದಶಕಗಳಿಂದ ಶೇ. 20 ರಷ್ಟು ಲಾಭಾಂಶವನ್ನು ನೀಡುತ್ತಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ ತಪಶೆಟ್ಟಿ ಮಾತನಾಡಿದರು.
ರಬಕವಿಯ ಗುರುಸಿದ್ಧೇಶ್ವರ ಸ್ವಾಮೀಜಿ ಮತ್ತು ಸಂಖದ ಮಹೇಶ ದೇವರು ಸಾನ್ನಿಧ್ಯ ವಹಿಸಿದ್ದರು. ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ, ಕವಿತಾ ಕೊಣ್ಣೂರ, ಬ್ಯಾಂಕ್ ಉಪಾಧ್ಯಕ್ಷ ವಿಜಯಕುಮಾರ ಕರಡಿಗುದ್ದಿ, ಸಂಗಪ್ಪ ಸಾಬೋಜಿ, ಬಸವರಾಜ ಯೆಂಡಿಗೇರಿ, ಬಸವರಾಜ ಮಟ್ಟಿಕಲ್ಲಿ, ರಾಜಶೇಖರ ಕುರ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈರಣ್ಣ ಗುಣಕಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಧರೆಪ್ಪ ಉಳ್ಳಾಗಡ್ಡಿ, ರಾಮಣ್ಣ ಹುಲಕುಂದ, ಶಿವಾನಂದ ದಾಶ್ಯಾಳ, ಮ.ಕೃ.ಮೇಗಾಡಿಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.